ಮಂಡ್ಯ: ಶ್ರೀರಂಗಪಟ್ಟಣ ದಸರಾ ಹಿನ್ನೆಲೆ ಚಾಮುಂಡೇಶ್ವರಿ ಹೋತ್ತು ಸಾಗುತ್ತಿದ್ದ ಗೋಪಾಲಸ್ವಾಮಿ ಹೆಸರಿನ ಆನೆ ಪಟಾಕಿ, ವಾದ್ಯದ ಸದ್ದಿಗೆ ಬೆದರಿ ದಿಕ್ಕಾಪಾಲಾಗಿ ಜನರತ್ತ ನುಗ್ಗಿ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.
ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬದಲ್ಲಿ ಪಾಲ್ಗೊಂಡು ಅಂಬಾರಿ ಹೊತ್ತು ಜಂಬೂಸವಾರಿ ಹೊರಟಿದ್ದ ಗೋಪಾಲಸ್ವಾಮಿ ಹೆಸರಿನ ಆನೆ ನಾಡದೇವಿಗೆ ಪುಷ್ಪಾರ್ಚನೆ ನಡೆದ ಬಳಿ ಪಟಾಕಿ, ವಾದ್ಯದ ಸದ್ದಿಗೆ ಬೆದರಿದೆ. ಶ್ರೀರಂಗಪಟ್ಟಣದ ಬನ್ನಿಮಂಟಪ ಬಳಿ ಈ ಘಟನೆ ನಡೆದಿದ್ದು, ಆನೆ ಗಾಬರಿಗೊಂಡು ಒಂದು ಸುತ್ತು ತಿರುಗಿದೆ. ಆನೆ ಬೆದರುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ನಂತರ ವಾದ್ಯ, ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲಾಯಿತು ಬಳಿಕ ಆನೆ ಸಮಾಧಾನಗೊಂಡಿದೆ. ಇದನ್ನೂ ಓದಿ: ದಸರಾ ಆನೆ ವಿಕ್ರಮನಿಗೆ ಮದ – ಈ ಬಾರಿ ದಸರಾದಿಂದ ವಿಕ್ರಮ ಔಟ್
ಜಂಬೂಸವಾರಿ ವೇಳೆ ಪಟಾಕಿ ಸಿಡಿಸಬೇಡಿ ಎಂದು ಮನವಿ ಮಾಡಿದ್ದರೂ ಸ್ಥಳೀಯರು ಪಟಾಕಿ ಸಿಡಿಸಿದ್ದರಿಂದ ಆನೆ ಬೆದರಿದೆ. ಪುಷ್ಪಾರ್ಚನೆ ಬೆನ್ನಲ್ಲೇ ಜಂಬೂಸವಾರಿ ಸ್ಥಗಿತಗೊಳಿಸಲಾಗಿದ್ದು, ಆನೆ ಮೇಲಿದ್ದ ಮರದ ಅಂಬಾರಿಯನ್ನು ಸಿಬ್ಬಂದಿ ಕಳಚಿಟ್ಟಿದ್ದಾರೆ. ಈ ಮೊದಲು ಮೈಸೂರಿನಲ್ಲೂ ಪಟಾಕಿ ಟ್ರೈನಿಂಗ್ ಹಾಗೂ ಫಿರಂಗಿ ತಾಲಿಮಿನ ವೇಳೆಯಲ್ಲೂ ಗೋಪಾಲಸ್ವಾಮಿ ಬೆದರಿದ್ದನು.