– ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ವಂಶಿಕೃಷ್ಣ
ಆನೇಕಲ್: ಕಳೆದ ಶನಿವಾರ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯ ಹಸಿರು ವ್ಯಾಲಿ ರೆಸಾರ್ಟ್ ನಲ್ಲಿ ಅಕ್ರಮವಾಗಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಹಸಿರು ವ್ಯಾಲಿ ರೆಸಾರ್ಟ್ ಗೆ ಭೇಟಿ ಕೊಟ್ಟಿದ್ದಾರೆ.
ಪಾರ್ಟಿ ನಡೆದಿದ್ದ ಜಾಗದಲ್ಲಿ ರಾತ್ರೋರಾತ್ರಿ ಗೋಶಾಲೆ ನಿರ್ಮಾಣವಾಗಿದ್ದು, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದ್ಯಾ? ಎಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ಪಾರ್ಟಿ ನಡೆದ ಸುತ್ತಮುತ್ತಲ ಜಾಗದಲ್ಲಿದ್ದ ಟೆಂಟ್ ಹೌಸ್, ಊಟದ ಟೇಬಲ್ಗಳು ಇಂದು ಮಾಯವಾಗಿದ್ದವು. ಇದನ್ನೂ ಓದಿ: ವಿಸರ್ಜನೆ ಸಂಬಂಧ ಜಿಲ್ಲಾಡಳಿತ, ಗಣಪತಿ ಮಂಡಳಿ ನಡುವೆ ಜಟಾಪಟಿ
ಬಿದಿರಿನ ಒಳಭಾಗದಲ್ಲಿ ಪಾರ್ಟಿ ನಡೆದಿದ್ದ ಜಾಗ ಸಂಪೂರ್ಣ ಸ್ವಚ್ಛವಾಗಿತ್ತು. ಹೀಗಾಗಿ ಪಾರ್ಟಿ ವೇಳೆ ಅನೈತಿಕ ಚಟುವಟಿಕೆಗಳು ನಡೆದಿದ್ಯಾ? ಎಂಬ ಅನುಮಾನ ಪೊಲೀಸರಿಗೆ ಕಾಡತೊಡಗಿದೆ. ಅಲ್ಲದೇ ಪಾರ್ಟಿ ವೇಳೆ ವಶಕ್ಕೆ ಪಡೆದಿರುವ 37 ಜನರನ್ನು ಮಾಜಿಸ್ಟ್ರೆಟ್ ಮುಂದೆ ಹಾಜರುಪಡಿಸಿದ್ದು, ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಅಲ್ಲದೇ ಅದರ ವರದಿಗಾಗಿ ಕಾಯಲಾಗುತ್ತಿದೆ ಎಂದು ವಂಶಿಕೃಷ್ಣ ತಿಳಿಸಿದ್ದಾರೆ.
ಅಕ್ರಮ ರೇವ್ ಪಾರ್ಟಿ ಆಯೋಜನೆ ಮಾಡಿದ್ದ ಆಶಿಶ್ ಗೌಡ ಹಾಗೂ ಅಶುತೋಶ್ ಉಗ್ರ ಎಂಬುವವರನ್ನು ತಮ್ಮ ವಶಕ್ಕೆ ಪಡೆದಿರುವ ಆನೇಕಲ್ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೆಸಾರ್ಟ್ ಮಾಲೀಕ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ. ಇದನ್ನೂ ಓದಿ: ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು
ಪಾರ್ಟಿ ಆಯೋಜನೆ ಮಾಡಿದ್ದು ಹೇಗೆ? ಯುವಕ-ಯುವತಿಯರನ್ನು ಹೇಗೆ ಸಂಪರ್ಕ ಮಾಡಿದ್ದಿರಾ? ಪಾರ್ಟಿಗೆ ಒಬ್ಬರಿಗೆ ಎಷ್ಟು ಶುಲ್ಕ ನಿಗದಿ ಮಾಡಿದ್ರಿ? ಇದೇ ಮೊದಲ ಪಾರ್ಟಿಯಾ? ಈ ಹಿಂದೆ ಬೇರೆ ಎಲ್ಲಾದರೂ ಇದೇ ರೀತಿಯ ಪಾರ್ಟಿ ಆಯೋಜನೆ ಮಾಡಿದ್ದಿರಾ? ಎಂಬ ಪ್ರಶ್ನೆಗಳನ್ನು ಆಯೋಜಕರನ್ನು ಕೇಳಲಾಗುತ್ತಿದೆ. ಈ ನಡುವೆ ಹಸಿರು ವ್ಯಾಲಿ ರೆಸಾರ್ಟ್ ನಡೆಸಲು ಅನುಮತಿ ಇದೆಯೇ? ಇಲ್ಲ ಅಕ್ರಮವಾಗಿ ಹಸಿರು ವ್ಯಾಲಿ ರೆಸಾರ್ಟ್ ನಡೆಸಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿಗಾಗಿ ಆನೇಕಲ್ ತಹಶೀಲ್ದಾರ್ ಅವರಿಗೆ ಪತ್ರವನ್ನು ಬರೆದಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ಪಾರ್ಟಿ ನಡೆದು ಆರೋಪಿಗಳನ್ನು ಬಂಧಿಸಿದ ಎರಡು ದಿನಗಳ ಬಳಿಕ ಬೆಂಗಳೂರು ಗ್ರಾಮಾಂತರ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಸಿರು ವ್ಯಾಲಿ ರೆಸಾರ್ಟ್ ಸಿಬ್ಬಂದಿಯ ಕಳ್ಳಾಟವೂ ಕೂಡ ಬಯಲಾಗಿದ್ದು, ಹೆಸರಾಂತ ಪ್ರವಾಸಿತಾಣ ಮುತ್ಯಾಲಮಡುವಿಗೆ ಹೋಗುವ ಗೂಗಲ್ ಮ್ಯಾಪ್ ಅನ್ನು ಹಸಿರು ವ್ಯಾಲಿಗೆ ಬದಲಾವಣೆ ಮಾಡುವ ಮೂಲಕ ತಮ್ಮ ಕಳ್ಳಾಟವನ್ನು ತೋರಿದ್ದಾರೆ. ಇದನ್ನೂ ಓದಿ: ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ