ಬೆಂಗಳೂರು/ನೆಲಮಂಗಲ: ಅಳಿಯನ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ ಸಂಚು ಹಾಕಿದ ಅತ್ತೆ ಪ್ರತಿನಿತ್ಯ ತನ್ನ ಮಗಳ ಪತಿಯನ್ನು ಮನೆಯಲ್ಲಿ ಕೂಡಿ ಹಾಕಿ ಟಾರ್ಚರ್ ಕೊಟ್ಟ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯ ತೋಟನಹಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಆನಂದ್ ಕುಮಾರ್ ಎಂದು ಗುರುತಿಸಲಾಗಿದ್ದು, ಇನ್ನೂ ಅತ್ತೆಯ ಜೊತೆಗೆ ತನ್ನ ಪತ್ನಿ ನೀಲಮ್ಮ ಕೂಡ ಕೈ ಜೋಡಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆ ಗಂಗಮ್ಮ, ಬಾಮೈದ ಗಂಗರಾಜು ಹೆಸರು ಪ್ರಸ್ತಾಪಿಸಿ ಮನನೊಂದು ಆನಂದ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ
ಆತ್ಮಹತ್ಯೆಗೂ ಮೊದಲು ತನ್ನ ಮೊಬೈಲ್ನ ವೀಡಿಯೋದಲ್ಲಿ ತನಗೆ ನೀಡಿದ್ದ ಹಿಂಸೆ ಬಗ್ಗೆ ಮಾತನಾಡಿರುವ ಮೃತ ವ್ಯಕ್ತಿ ಜೊತೆಗೆ ತನ್ನ ಆಸ್ತಿಯನ್ನು ತಮ್ಮನ ಮಕ್ಕಳಿಗೆ ನೀಡಬೇಕು ಎಂದು ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಮತ್ತು ಯಾವುದೇ ಕಾರಣಕ್ಕೂ ಆಸ್ತಿ ಹೆಂಡತಿ ಹಾಗೂ ಅತ್ತೆಗೆ ಸಿಗದಂತೆ ಕಾನೂನು ರೀತಿಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.