ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಬಳಿ ಇರುವ ಕದಂಬ ನೌಕಾನೆಲೆ ಸೇರಿದಂತೆ ಭಾರತೀಯ ನೌಕಾದಳದಲ್ಲಿ ಇಂದಿನಿಂದಲೇ ಜಾರಿ ಬರುವಂತೆ ಸ್ಮಾರ್ಟ್ ಫೋನ್, ಫೇಸ್ಬುಕ್ ಹಾಗೂ ಇಂಟರ್ನೆಟ್ ಬಳಕೆಗೆ ಭಾರತೀಯ ನೌಕಾಪಡೆ ನಿಷೇಧ ಹೇರಿದೆ.
ಕಳೆದ ತಿಂಗಳು ಪಾಕಿಸ್ತಾನದ ಹನಿಟ್ರ್ಯಾಪ್ ಬಲೆಗೆ ಸಿಲುಕಿ, ಭಾರತದ ಭದ್ರತೆಗೆ ಸಂಬಂಧಿಸಿದ ಬಹುಮುಖ್ಯ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದ ಮೇರೆಗೆ ಸುಮಾರು 10 ಮಂದಿಯನ್ನು ಬಂಧಿಸಲಾಗಿತ್ತು. ಜಿಲ್ಲೆಯ ಕಾರವಾರದ ಅರಗಾದ ಕದಂಬ ನೌಕಾನೆಲೆಯ ಇಬ್ಬರು, ಭಾರತೀಯ ನೌಕಾಪಡೆಯ ಒಟ್ಟು 7 ಸಿಬ್ಬಂದಿ ಹಾಗೂ ಓರ್ವ ಹವಾಲ ವ್ಯವಹಾರದ ವ್ಯಕ್ತಿಯನ್ನು ಆಂಧ್ರ ಪೋಲೀಸರು ಬಂಧಿಸಿದ್ದರು.
ಹೀಗಾಗಿ ಭಾರತೀಯ ನೌಕಾಪಡೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ನೌಕಾ ಸಿಬ್ಬಂದಿ ಸಮುದ್ರ ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳು ಹಾಗೂ ಸ್ಮಾರ್ಟ್ ಫೋನ್ ಬಳಸುವುದನ್ನು ನಿಷೇಧಿಸಿದೆ. ಈ ಹಿಂದೆ ಇಂಟರ್ ನೆಟ್, ಸ್ಮಾರ್ಟ್ ಫೋನ್ ಬಳಸುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಏಳು ಜನ ನೌಕಾ ಸಿಬ್ಬಂದಿ ಬಂಧನದ ನಂತರ ಮೊಬೈಲ್ ಬಳಕೆಯಿಂದಲೇ ದೊಡ್ಡ ದೊಡ್ಡ ಮಾಹಿತಿ ಪಾಕಿಸ್ತಾನ ಗುಪ್ತ ದಳಕ್ಕೆ ಹಂಚಿಕೆಯಾಗಿತ್ತು.
ಇದಲ್ಲದೇ ದೊಡ್ಡ ಅಧಿಕಾರಿಗಳನ್ನು ಸಹ ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಪಾಕಿಸ್ತಾನ ಗುಪ್ತದಳ ಇಲಾಖೆ ನೌಕಾದಳದವರಿಂದ ಹಲವು ಮಾಹಿತಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾದಳ ಈ ನಿರ್ಧಾರ ಕೈಗೊಂಡಿದೆ.