ಕಲಬುರಗಿ: ಕೊರೊನಾ ವೈರಸ್ಗೆ ಕಲಬುರಗಿ ವ್ಯಕ್ತಿ ಬಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ನಗರದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡುವಂತೆ ಆದೇಶಿಸಿದೆ.
ತಕ್ಷಣದಿಂದಲೇ ನಗರದ ಎಲ್ಲಾ ಅಂಗಡಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವಂತೆ ಆದೇಶ ನೀಡಲಾಗಿದೆ. ಅಗತ್ಯ ವಸ್ತಗಳನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟುಗಳನ್ನು ಬಂದ್ ಮಾಡುವಂತೆ ಡಿಸಿ ಆದೇಶಿಸಿದ್ದಾರೆ. ಕೇವಲ ಆಸ್ಪತ್ರೆ, ಮೆಡಿಕಲ್ ಶಾಪ್ ಹಾಲು, ತರಕಾರಿ ಹಾಗೂ ಕಿರಾಣಿ ಅಂಗಡಿಗಳು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.
ಪಾಲಿಕೆಯ ಅಧಿಕಾರಿಗಳಿಂದ ನಗರದಲ್ಲಿರುವ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಈ ಮೂಲಕ ಕೊರೊನಾ ಕಾಯಿಲೆ ಹರಡದಂತೆ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಜಿಲ್ಲಾಧಿಕಾರಿ, ಅನಗತ್ಯವಾಗಿ ಯಾರೂ ಮನೆಯಿಂದ ಹೊರಬಾರದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಅಗತ್ಯ ವಸ್ತುಗಳು ಬೇಕಿದ್ದಲ್ಲಿ ಮನೆಯ ಒಬ್ಬ ಸದಸ್ಯ ಮಾತ್ರ ಹೊರಗೆ ಬಂದು ತಂದುಕೊಡುವಂತೆ ಸಲಹೆ ನೀಡಿದ್ದರು. ಇಷ್ಟು ಮಾತ್ರವಲ್ಲದೆ ಯಾರೂ ಕಲಬುರಗಿ ಜಿಲ್ಲೆಯತ್ತ ಧಾವಿಸಬೇಡಿ ಎಂದು ಕೂಡ ಜಿಲ್ಲಾಧಿಕಾರಿ ಕೇಳಿಕೊಂಡಿದ್ದರು.