ಶಿವಮೊಗ್ಗ : ಸೊರಬ (Soraba) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಮಧು ಬಂಗಾರಪ್ಪ (Madhu Bangarappa) ಅವರ ಜನಪರ ಕಾಳಜಿ, ಸೇವಾ ಮನೋಭಾವ ನನಗೆ ಇಷ್ಟ. ಅವರನ್ನು ಗೆಲ್ಲಿಸಿ, ಮಧು ಗೆದ್ದರೆ ಸೊರಬಕ್ಕೆ ಬಂದು ನಿಮ್ಮೊಂದಿಗೆ ಕುಣಿದು ಕುಪ್ಪಳಿಸುವೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ತಿಳಿಸಿದರು.
ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರದ ರೋಡ್ ಶೋನಲ್ಲಿ (Road Show) ಮಾತನಾಡಿದ ಅವರು, ಸೊರಬ ತಾಲೂಕಿಗೆ ಹಲವು ಬಾರಿ ಬಂದಿದ್ದೇನೆ. ಆದರೆ ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಆದರೆ ಮಧು ಬಂಗಾರಪ್ಪ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂಬ ಉದ್ದೇಶದಿಂದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದರು.
ಮಧು ಅವರು ತಾಲೂಕಿನ ಜನತೆಯ ಕಷ್ಟ ಸುಖಗಳಲ್ಲಿ ಸದಾ ಇರುವುದರಿಂದ ಜನತೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸ ಇದೆ. ಗೆಲುವು ಸಾಧಿಸಿದ ನಂತರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರೊಂದಿಗೆ ಹಾಡಿ ಕುಣಿದು ಕುಪ್ಪಳಿಸುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆದ ಅಭಿಮಾನಿ
ಕೇವಲ ಸೊರಬ ಕ್ಷೇತ್ರದಲ್ಲಿ ಅಷ್ಟೇ ಪ್ರಚಾರ ನಡೆಸದೇ, ರಾಜ್ಯದ ಇತರೆ ಕ್ಷೇತ್ರಗಳಾದ ಸಾಗರ, ತೀರ್ಥಹಳ್ಳಿ, ಬೀದರ್, ಶಿರಸಿ ಹಾಗೂ ಹುಬ್ಬಳ್ಳಿಯ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲೂ ಪ್ರಚಾರ ನಡೆಸುತ್ತೇನೆ. ಶೆಟ್ಟರ್ (Jagadish Shettar) ಅವರು ನಮ್ಮ ಕುಟುಂಬಸ್ಥರು ಇದ್ದ ಹಾಗೆ. ಹಾಗಾಗಿ ಅವರ ಕ್ಷೇತ್ರದಲ್ಲೂ ಪ್ರಚಾರ ನಡೆಸುತ್ತೇನೆ. ನನಗೆ ರಾಜಕೀಯ ತಿಳಿದಿಲ್ಲ. ನಾನು ರಾಜಕೀಯಕ್ಕೆ ಸೇರುವುದು ಇಲ್ಲ. ನಾನು ಕೇವಲ ಪ್ರಚಾರವನ್ನಷ್ಟೇ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪ್ರವೀಣ್ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ – ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಭೇಟಿ