– ಬಿಎಸ್ವೈಗೆ ತತ್ವನೂ ಇಲ್ಲಾ, ಸಿದ್ದಾಂತನೂ ಇಲ್ಲಾ
ಕೊಪ್ಪಳ: ಬಿಜೆಪಿಯಲ್ಲಿ ಒಂದು ಸಿದ್ದಾಂತವಿದೆ, ಯಾರು ಅವರ ಪಕ್ಷಕ್ಕೆ ಸಹಾಯ ಮಾಡಿರುತ್ತಾರೋ ಅವರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತದೆ ಎಂದು ಕಮಲದ ವಿರುದ್ಧ ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಮಹತ್ಮಾ ಗಾಂಧಿಜಿಯ 150ನೇ ಜಯಂತಿ ಆಚರಣೆ ಅಂಗವಾಗಿ ಸದ್ಭಾವನಾ ಯಾತ್ರೆ ವೇಳೆ ಬಿಜೆಪಿ ವಿರುದ್ಧ ಶಿವರಾಜ ತಂಗಡಗಿ ವಾಗ್ದಾಳಿ ನೆಡಸಿದರು. ಸಹಾಯ ಮಾಡಿರುವವರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತದೆ. ಇದು ಬಿಜೆಪಿ ಸಿದ್ಧಾಂತ. ಇದೀಗ ಅನರ್ಹರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತಿದೆ. ಈ ಹಿಂದೆ ನಾವು ಆರು ಜನ ಬಿಜೆಪಿಗೆ ಸಹಾಯ ಮಾಡಿದ್ದೆವು. ನಾವು ಸಹಾಯ ಮಾಡಿದಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎಂದು ಹೇಳಿ ಕಿಡಿಕಾರಿದರು.
ಸಿಎಂ ಯಡಿಯೂರಪ್ಪಗೆ ತತ್ವನೂ ಇಲ್ಲಾ, ಸಿದ್ದಾಂತನೂ ಇಲ್ಲಾ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಆರ್ಎಸ್ಎಸ್ ಮತ್ತು ಬಿಜೆಪಿ ಸಿದ್ಧವಾಗಿದೆ. ಬಿಜೆಪಿ ಅನರ್ಹರನ್ನು ಬೀದಿಗೆ ತಂದು ನಿಲ್ಲಿಸಿದೆ. ಸುಪ್ರಿಂ ಕೋರ್ಟ್ ತೀರ್ಪಿನ ಮೇಲೆ ಅನರ್ಹರ ಭವಿಷ್ಯ ನಿಂತಿದೆ. ಒಂದು ವೇಳೆ ಅನರ್ಹರ ವಿರುದ್ಧ ತೀರ್ಪು ಬಂದಿದ್ದೆ ಆದಲ್ಲಿ ಅನರ್ಹರು ಬಿಜೆಪಿ ವಿರುದ್ಧ ಬೊಬ್ಬೆ ಹೊಡೆಯುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು. ಹಾಗೆಯೇ ಬಿಎಸ್ವೈ ಆಡಿಯೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿ, ಆಡಿಯೋದಲ್ಲಿ ಹೇಳಿದ್ದು ಸತ್ಯವಾದ ಮಾತು, 16 ಜನ ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಹೊರ ಬರದಿದ್ದರೆ ಇಂದು ಬಿಜೆಪಿ ಸರ್ಕಾರ ಆಗುತ್ತಿರಲಿಲ್ಲ ಎಂದು ಸಿಎಂ ವಿರುದ್ಧ ಮಾತಿನ ಚಾಟಿ ಬೀಸಿದರು.
ಅಯೋಧ್ಯೆ ಪ್ರಕರಣದ ಬಗ್ಗೆ ಮಾತನಾಡಿ, ರಾಮ ಮಂದಿರ ಕಟ್ಟುವುದಕ್ಕೆ ಯಾರ ವಿರೋಧವಿಲ್ಲ. ಆದರೆ ದೇಶದ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಬಿಜೆಪಿ ರಾಮ ಮಂದಿರ ವಿಚಾರವನ್ನು ದೊಡ್ಡದಾಗಿ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಏನೇ ತೀರ್ಪು ಕೊಟ್ಟರೂ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.