ಬೆಂಗಳೂರು: ಶನಿವಾರ ಸುರಿದ ಯಮರೂಪಿ ಮಳೆಗೆ ಕುರಬರಹಳ್ಳಿಯ ರಾಜಕಾಲುವೆಯಲ್ಲಿ ಕೊಚ್ಚಿಹೊದ ಶಾಂತಕುಮಾರ್ ಮೃತದೇಹ 5 ದಿನ ಕಳೆದ್ರು ಇನ್ನೂ ಪತ್ತೆಯಾಗಿಲ್ಲ. ಇತ್ತ ಅವರ ಕುಟುಂಬದವರ ದುಃಖ ಮುಗಿಲು ಮುಟ್ಟಿದ್ದು, ಶಾಂತಕುಮಾರ್ ಮರಳಿ ಬಂದೇ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ಶಾಂತಕುಮಾರ್ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮನೆಯ ಆಧಾರ ಸ್ತಂಭವಾಗಿದ್ದ ಶಾಂತಕುಮಾರ್ ಬರುತ್ತಾರೆ ಎಂಬ ನಿರೀಕ್ಷೆಯಲ್ಲೇ ಎಲ್ಲರು ಇದ್ದಾರೆ. ಅದರಲ್ಲೂ ಇನ್ನೂ ಪ್ರಪಂಚದ ಅರಿವೇ ಇಲ್ಲದ ಮುದ್ದು ಕಂದಮ್ಮ 9 ತಿಂಗಳ ಮಗು ಹಾಗೂ ಮೂರು ವರ್ಷದ ಮೌನೇಶ್ ಗೌಡ ಅಪ್ಪನ ದಾರಿ ಕಾಯ್ತಿದ್ದಾರೆ.
ಶಾಂತಕುಮಾರ್ ಕಣ್ಮರೆಯಾಗಿ 5 ದಿನಗಳು ಕಳೆದ್ರೂ, ಇನ್ನು ಅವರು ಪತ್ತೆಯಾಗಿಲ್ಲ. ಅಪ್ಪನನ್ನ ನೋಡದ ಮಕ್ಕಳು, ಪತಿ ಬಂದೇ ಬರುತ್ತಾರೆಂದು ಕಣ್ಣೀರಲ್ಲೇ ಕೈತೊಳೆಯುತ್ತಿರುವ ಪತ್ನಿ ಸರಸ್ವತಿ, ಮತ್ತೊಂದೆಡೆ ಮಗ ಮತ್ತೆ ಬರುತ್ತಾನೆಂಬ ಭರವಸೆಯಲ್ಲಿರುವ ಪೋಷಕರು ಶಾಂತಕುಮಾರ್ ಇಂದಲ್ಲ ನಾಳೆ ಬರುತ್ತಾನೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.