ಬಳ್ಳಾರಿ: ಅಂತಿಮ ಘಟ್ಟ ತಲುಪಿರುವ ಬಿಜೆಪಿ ಪಾದಯಾತ್ರೆಯ(BJP Padyatra) ಸಮಾರೋಪ ಸಮಾರಂಭಕ್ಕೆ ಬಳ್ಳಾರಿಯ(Ballari) ಎಕ್ಸ್ ಮುನಿಸಿಪಲ್ ಶಾಲಾ ಮೈದಾನವನ್ನು ಬಳಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ.
ಸೆಪ್ಟೆಂಬರ್ 10 ರಂದು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಸಮಾರೋಪ ಸಮಾವೇಶ ನಡೆಸಲು ಅನುಮತಿ ಕೋರಿ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದರು. ಆದರೆ ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯು ಮೈದಾನ ನೀಡಲು ಸಮ್ಮತಿಸಿಲ್ಲ.
ಅನುಮತಿ ಇಲ್ಲ ಯಾಕೆ?
ಸರ್ಕಾರಿ ಶಾಲಾ-ಕಾಲೇಜುಗಳ ಆವರಣ ಹಾಗೂ ಮೈದಾನಗಳನ್ನು ಖಾಸಗಿ ಸಂಸ್ಥೆಗಳು, ಸಂಘಟನೆಗಳ ಕಾರ್ಯಕ್ರಮಗಳಿಗೆ ನೀಡಬಾರದು ಎಂಬ ಸರ್ಕಾರದ ಕಡ್ಡಾಯ ಆದೇಶವನ್ನು ಮುಂದಿಟ್ಟು ಅನುಮತಿ ನಿರಾಕರಿಸಲಾಗಿದೆ.
ಬಳ್ಳಾರಿ ಚಲೋ ಪಾದಯಾತ್ರೆ 7ನೇ ದಿನವೂ ಅಭೂತಪೂರ್ವ ಜನಬೆಂಬಲದೊಂದಿಗೆ ಮುನ್ನಡೆಯುತ್ತಿದೆ!
ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸುವ ಸಂಕಲ್ಪ ಜನಜನಿತ ಹೋರಾಟವಾಗಿ ರೂಪುಗೊಂಡಿದೆ.#BallariChalo #CongressFailsKarnataka pic.twitter.com/2C68SiGrQ3
— BJP Karnataka (@BJP4Karnataka) September 8, 2026
ಸರ್ಕಾರಿ ಆಸ್ತಿಗಳಾದ ಶಾಲೆ, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವೆಂದು ಕಳೆದ ವರ್ಷದ ಅಕ್ಟೋಬರ್ 18 ರಂದು ಸಚಿವ ಸಂಪುಟವು ನಿರ್ಧರಿಸಿ ಮಾರ್ಗಸೂಚಿ ಹೊರಡಿಸಿತ್ತು.
ಸರ್ಕಾರಿ ಆಸ್ತಿಗಳಾದ ಶಾಲೆಗಳು, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಅಥವಾ ಗುಂಪುಗಳು ಯಾವುದೇ ಕಾರ್ಯಕ್ರಮ ಅಥವಾ ಸಮಾವೇಶ ನಡೆಸಲು ಪೂರ್ವಾನುಮತಿ ಪಡೆಯುವುದು ಈ ಆದೇಶದ ಅನ್ವಯ ಕಡ್ಡಾಯ.
ಸಾರ್ವಜನಿಕ ಸ್ಥಳಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಳೆದ ಮುಂಗಾರು ಅಧಿವೇಶನದಲ್ಲಿ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ಮಸೂದೆ-2026’ ಅನ್ನು ಮಂಡಿಸಲು ಮುಂದಾಗಿತ್ತು. ಆದರೆ ವಿರೋಧ ಪಕ್ಷಗಳ ಧರಣಿಯಿಂದಾಗಿ ಅದು ಚರ್ಚೆಗೆ ಬರಲಿಲ್ಲ.
ಇನ್ನೊಂದೆಡೆ, ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಈ ಹಿಂದೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ನಡೆಸುತ್ತಿದೆ.
ಬಿವೈ ವಿಜಯೇಂದ್ರ ನೇತೃತ್ವದ ಬಳ್ಳಾರಿ ಚಲೋ ಪಾದಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಂಡೂರು ವಿಧಾನಸಭಾ ಕ್ಷೇತ್ರದಿಂದ ಪಾದಯಾತ್ರೆ ಆರಂಭಗೊಂಡಿದ್ದು ನಾಳೆ ಬಳ್ಳಾರಿಯನ್ನು ತಲುಪಲಿದೆ.
