ನವದೆಹಲಿ: 500, 1000 ಮುಖಬೆಲೆ ನೋಟುಗಳನ್ನು 2016ರಲ್ಲಿ ಅಮಾನ್ಯೀಕರಣ (Demonitisation) ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿಲ್ಲ. ನೋಟು ಅಮಾನ್ಯೀಕರಣಗೊಳಿಸಿದ್ದು ದೇಶದ ಆರ್ಥಿಕತೆಗೆ ವಿನಾಶಕಾರಿಯಾಗಿದೆ. ಅಲ್ಲದೇ ಜನರ ಜೀವನೋಪಾಯವನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ (Congress) ಮತ್ತೆ ಕಿಡಿಕಾರಿದೆ.
ನೋಟ್ ಬ್ಯಾನ್ ಮಾಡಿದ್ದ ಕೇಂದ್ರದ ನಿರ್ಧಾರ ನ್ಯಾಯ ಸಮ್ಮತವಾಗಿದೆ ಎಂದು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಇಂದು ತೀರ್ಪು ಪ್ರಕಟಿಸಿತು. ಅಲ್ಲದೇ ನೋಟು ಅಮಾನ್ಯೀಕರಣ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು. ಈ ಕುರಿತು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್
ನೋಟು ಅಮಾನ್ಯೀಕರಣವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಹೇಳುವುದು ಸಂಪೂರ್ಣ ತಪ್ಪು. 2016ರ ನವೆಂಬರ್ 8 ರಂದು ನೋಟು ಅಮಾನ್ಯೀಕರಣವನ್ನು ಘೋಷಿಸುವ ಮೊದಲು RBI ಕಾಯಿದೆ, 1934 ರ ಸೆಕ್ಷನ್ 26(2) ಅನ್ನು ಸರಿಯಾಗಿ ಅನ್ವಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಅಷ್ಟೆ. ಜೊತೆಗೆ ಒಬ್ಬರು ನ್ಯಾಯಾಧೀಶರು ಕೇಂದ್ರದ ನಿರ್ಧಾರದ ವಿರುದ್ಧ ತೀರ್ಪನ್ನು ಪ್ರಕಟಿಸಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ನೋಟು ಅಮಾನ್ಯೀಕರಣದ ಪರಿಣಾಮದ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಇದು ಕೇಂದ್ರ ಕೈಗೊಂಡ ವಿನಾಶಕಾರಿ ನಿರ್ಧಾರವಾಗಿದೆ. ಇದು ಬೆಳವಣಿಗೆಯ ವೇಗಕ್ಕೆ ಪೆಟ್ಟು ನೀಡಿದೆ. MSMEಗಳನ್ನು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ) ದುರ್ಬಲಗೊಳಿಸಿತು. ಅನೌಪಚಾರಿಕ ವಲಯವನ್ನು ಕೊನೆಗಾಣಿಸಿತು ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನೂ ಓದಿ: ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ
ಚಲಾವಣೆಯಲ್ಲಿರುವ ಕರೆನ್ಸಿಯನ್ನು ಕಡಿಮೆ ಮಾಡುವುದು, ನಗದು ರಹಿತ ಆರ್ಥಿಕತೆಯತ್ತ ಸಾಗುವುದು, ನಕಲಿ ಕರೆನ್ಸಿಗೆ ಕಡಿವಾಣ ಹಾಕುವುದು, ಭಯೋತ್ಪಾದನೆಯನ್ನು ಕೊನೆಗೊಳಿಸುವುದು, ಕಪ್ಪುಹಣವನ್ನು ಹೊರತೆಗೆಯಲಾಗುವುದು ಎಂದು ಕೇಂದ್ರ ಸಮರ್ಥಿಸಿಕೊಂಡಿತ್ತು. ಆದರೆ ಈ ಯಾವ ಗುರಿಗಳನ್ನೂ ಸಾಧಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.