ಬೆಂಗಳೂರು: ಸ್ಲಂನಲ್ಲಿ ಚಿಂದಿ ಆಯುವ ಇಬ್ಬರು ಹುಡುಗರು ಹಣದ ಆಸೆಗಾಗಿ ಕೆಟ್ಟ ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ. ಈ ಇಬ್ಬರು ಸ್ನೇಹಿತರ ಜೀವನದಲ್ಲಿ ನಡೆಯುವಂಥ ಘಟನೆಗಳನ್ನಿಟ್ಟುಕೊಂಡು ನಿರ್ದೇಶಕ ರಾಜು.ಡಿ. ಪದ್ಮಶಾಲಿ ಅವರು ಕಥಾಹಂದರ ಹೆಣೆದಿರುವ ಈ ಚಿತ್ರದ ಹೆಸರು ಸಲಾಂ ಬೆಂಗಳೂರು. ಸಂದೇಶ್ ಪೂಜಾರ್ ಹಾಗೂ ಕಿರುತೆರೆ ನಟಿ ಗೌತಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದೆ. ಸ್ಲಂನಲ್ಲಿ ನಡೆಯುವಂಥಾ ಘಟನೆಗಳನ್ನು ಸಸ್ಸೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಕಥಾ ಹಂದರದ ಮೂಲಕ ಹೇಳಹೊರಟಿರುವ ಈ ಚಿತ್ರದ ಪ್ರಥಮ ಪ್ರತಿ ಹೊರಬಂದಿದೆ.
ಆರ್.ಡಿ.ಪಿ. ಮೂವೀ ಮೇಕರ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಸ್.ನಾಗು ಸಂಗೀತ, ಮನೋಹರ್ ಛಾಯಾಗ್ರಹಣ, ಆನಂದ್ ಪ್ರಸಾದ್ ಸಾಹಿತ್ಯ, ರಾಜು.ಡಿ ಸಂಭಾಷಣೆ, ರಘು ಸಂಕಲನ, ರಾಹುಲ್ ಸುಧಾಂಶ್, ಮೆಂಡ್ರು ಬ್ರದರ್ಸ್ ಸಹ ನಿರ್ಮಾಪಕರು, ನಾಗರಾಜ್ ನೃತ್ಯ ನಿರ್ದೇಶನ, ಅನಿಲ್ ಕುಮಾರ್ ಗ್ರಾಫಿಕ್ಸ್ ಇದೆ. ಸಂದೇಶ್ ಪೂಜಾರ್, ಗೌತಮಿ, ಧರಣಿ, ಅರವಿಂದ್ ರಾಜ್ ಪ್ರಭಾಕರ್, ಆಂಜನೇಯ ರೆಡ್ಡಿ, ಉಮಾ ಹೆಬ್ಬಾರ್, ಬಾಲು ಸಮರ್ಥ್, ರಾಜು ಆಡಗೋಡಿ ಮುಂತಾದವರ ತಾರಾಬಳಗವಿದೆ.