ಮಂಗಳೂರು: ನಗರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಕ್ರಿಸ್ಮಸ್ ಹಬ್ಬದ ಗುಂಗಿನಲ್ಲಿದ್ದ ರೌಡಿಶೀಟರ್ ಓರ್ವನನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಂಗಳೂರಿನ ವೆಲೆನ್ಸಿಯಾದ ಗೋರಿಗುಡ್ಡದಲ್ಲಿ ಘಟನೆ ನಡೆದಿದ್ದು, 25 ವರ್ಷದ ಮೆಲ್ರಿಕ್ ಡಿಸೋಜ ಹತ್ಯೆಯಾದ ಯುವಕ. ಈ ಗೋರಿಗುಡ್ಡದ ಮನೆಯಲ್ಲಿ ತಡರಾತ್ರಿ ಕ್ರಿಸ್ಮಸ್ ಪಾರ್ಟಿಯಲ್ಲಿದ್ದ ವೇಳೆ ಐವರು ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿದ್ದು, ಮನೆಯ ಆವರಣದಲ್ಲಿ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ಮೆಲ್ರಿಕ್ ಡಿಸೋಜ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣ ಸೇರಿದಂತೆ ಪಾಂಡೇಶ್ವರ ಮತ್ತು ಬಂದರು ಠಾಣೆಗಳಲ್ಲಿ ಪ್ರಕರಣ ಎದುರಿಸುತ್ತಿದ್ದ. ಕಳೆದ ವರ್ಷ 2016 ಆಗಸ್ಟ್ ತಿಂಗಳಲ್ಲಿ ವೆಲೆನ್ಸಿಯಾ ಸಮೀಪದ ಮಾರ್ನಮಿಕಟ್ಟೆ ಎಂಬಲ್ಲಿ ಸಂದೀಪ್ ಶೆಟ್ಟಿ ಎಂಬಾತನ ಕೊಲೆ ಯತ್ನ ನಡೆದಿತ್ತು. ಆ ಪ್ರಕರಣದಲ್ಲಿಯೂ ಮೆಲ್ರಿಕ್ ಡಿಸೋಜ ಆರೋಪಿಯಾಗಿದ್ದ.
ಇದೀಗ ಸೇಡು ತೀರಿಸಿದ ಮಾದರಿಯಲ್ಲಿ ಈ ಕೊಲೆ ನಡೆದಿದ್ದು, ಯಾರು ಕೃತ್ಯ ನಡೆಸಿದ್ದಾರೆಂದು ಇನ್ನಷ್ಟೆ ಗೊತ್ತಾಗಬೇಕು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.