ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಮಧ್ಯೆ ನಡೀತಿರುವ ಹೇಟ್ ವಾರ್ ಗೆ ಇತಿಶ್ರೀ ಹಾಡುವಂತೆ ಯಶ್ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಮರ ತಾರಕಕ್ಕೇರುತ್ತಿದ್ದಂತೆಯೇ ಸುದೀಪ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಯಶ್ ಅವರು ಕೂಡ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಯಶ್ ತಮ್ಮ ಅಭಿಮಾನಿಗಳಲ್ಲಿ ಮನವಿ:
ಎಲ್ಲಾರಿಗೂ ನಮಸ್ಕಾರ…
ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರೋ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್ ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್ ಅವರು ನನಗಿಂತ ಹಿರಿಯರು. ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೇ. ಘನತೆಯಿಂದ ವರ್ತಿಸಿ, ಇದನ್ನ ದೊಡ್ಡದು ಮಾಡಬೇಡಿ. ನಾನು ಸಾರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಸಾರ್ ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸುತ್ತೇನೆ. ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳುವುದಕ್ಕಾಗಿ ಅವರನ್ನ ಅಗೌರವದಿಂದ ಕಾಣೋದು ಸರಿಯಲ್ಲ. ದಯವಿಟ್ಟು ಇದನ್ನ ಇಲ್ಲಿಗೆ ಬಿಡಿ ಎಂದು ಬರೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
— Yash (@TheNameIsYash) June 7, 2018
ಏನಿದು ಘಟನೆ:
ಕಿಚ್ಚ ಸುದೀಪ್ ಅವರು ಯಶ್ ಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಸುದೀಪ್ ಚಾಲೆಂಜ್ ಸ್ವೀಕರಿಸಿದ್ದ ಯಶ್ ತಮ್ಮ ಸ್ನೇಹಿತನ ಫಿಟ್ನೆಸ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ವಿಡಿಯೋದಲ್ಲಿ ಯಶ್, ಕಿಚ್ಚ ಸುದೀಪ್ ಅವರನ್ನು ಹೆಸರು ಹೇಳಿ ಕರೆದಿದ್ದರು. ಇದಕ್ಕೆ ಸುದೀಪ್ ಅಭಿಮಾನಿಗಳು, ಸುದೀಪ್ ಅವರನ್ನು ಸರ್ ಎಂದು ಹೇಳಿ ಕರೆಯಬೇಕಿತ್ತು. ಆದರೆ ಬರೀ ಸುದೀಪ್ ಎಂದು ಹೇಳಿ ಕರೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ವಯಸ್ಸಿನಲ್ಲೂ ಅಣ್ಣನ ಸ್ಥಾನದಲ್ಲಿರುವ ಸುದೀಪ್ ಅವರ ಹೆಸರನ್ನು ಹೇಳಿ ಕರೆಯುವುದು ಎಷ್ಟು ಸರಿ ಎಂದು ಯಶ್ ವಿರುದ್ಧ ತಮ್ಮ ಆಕ್ರೋಶವನ್ನು ಸುದೀಪ್ ಅಭಿಮಾನಿಗಳು ಹೊರಹಾಕುತ್ತಿದ್ದರು. ಈ ಬಗ್ಗೆ ಸುದೀಪ್ ಯಶ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಹಾಕದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಯಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ನಟರು ಮನವಿ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಸಮರಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ.