ಮೈಸೂರು: ಮುಸ್ಲಿಮರು ಈ ದೇಶದ ಪ್ರಜೆಗಳು. ಅವರು ವ್ಯಾಪಾರ ಮಾಡದಂತೆ ನಿಷೇಧ ವಿಧಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡದೇ ಇರುವುದು ಅಮಾನವೀಯ ನಡೆ. ಮುಸ್ಲಿಮರು ಈ ದೇಶದ ಪ್ರಜೆಗಳು. ಅವರನ್ನು ಅಲ್ಲಿ ವ್ಯಾಪಾರಕ್ಕೆ ಬರಬೇಡಿ, ಇಲ್ಲಿ ಬರಬೇಡಿ ಎಂದು ಹೇಳುವುದು ಸಂವಿಧಾನ ವಿರೋಧಿ ನಿಲುವು. ರಾಜ್ಯ ಸರ್ಕಾರ ತಕ್ಷಣ ಮುಸ್ಲಿಂ ವರ್ತಕರ ನೆರವಿಗೆ ಬರಬೇಕು. ಇಂತಹ ಬಹಿಷ್ಕಾರಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವರ್ತಕರಿಗೆ ವ್ಯಾಪಾರ ನಿಷೇಧ ವಿಚಾರ: ಸಿಡಿದೆದ್ದ ಕರಾವಳಿ ಶಾಸಕರು
ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾಗಾಗಿ ʻಜೇಮ್ಸ್ʼ ಸಿನಿಮಾವನ್ನು ಚಿತ್ರಮಂದಿಗಳಿಂದ ತೆಗೆಯುವಂತೆ ಉಂಟಾಗಿರುವ ಒತ್ತಡ ಕುರಿತು ಪ್ರತಿಕ್ರಿಯಿಸಿ, ಅಪ್ಪುಗೆ ಅಭಿಮಾನಿ ಬಳಗ ದೊಡ್ಡದಿದೆ. ಡಾ.ರಾಜ್ ಕುಟುಂಬ ಕರ್ನಾಟದಕ ಸಾಂಸ್ಕೃತಿಕ ರಾಯಭಾರಿ ಕುಟುಂಬ. ಇಂತಹ ಕುಟುಂಬದ ಕುಡಿಯ ಕೊನೆಯ ಚಿತ್ರ ಜೇಮ್ಸ್. ಈ ಚಿತ್ರವನ್ನು ಒತ್ತಾಯ ಪೂರ್ವಕವಾಗಿ ಪ್ರದರ್ಶನ ಕಡಿತ ಮಾಡುವುದು ತಪ್ಪು. ಈ ರೀತಿ ಪ್ರದರ್ಶನ ರದ್ದು ಮಾಡಿದರೆ ಅದು ಕನ್ನಡಿಗರಿಗೆ ಮಾಡಿದ ಅಪಮಾನ. ಇದರ ವಿರುದ್ಧ ಜನ ರೊಚ್ಚಿಗೇಳುತ್ತಾರೆ ಎಂದು ಎಚ್ಚರಿಸಿದರು.
ಕಾಶ್ಮೀರ್ ಫೈಲ್ಸ್ ರಕ್ತ ಸಿಕ್ತ ಚರಿತ್ರೆ. ಅದನ್ನು ನೋಡಬೇಕೆನ್ನುವವರು ನೋಡಲಿ. ಅದಕ್ಕೆ ಯಾರ ಅಡ್ಡಿಯೂ ಇಲ್ಲ. ಇನ್ನೊಂದು ಭಾಷೆಯ ಚಿತ್ರಕ್ಕಾಗಿ ಕನ್ನಡದ ಸಿನಿಮಾ ಪ್ರದರ್ಶನ ಸಂಖ್ಯೆ ಕಡಿಮೆ ಮಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ