ಬೆಂಗಳೂರು: ಈಗ ಪ್ರೇಕ್ಷಕ ವಲಯವನ್ನು ಹಾಡುಗಳಿಂದಲೇ ಆವರಿಸಿಕೊಂಡು ಥೇಟರಿನತ್ತ ಮುಖ ಮಾಡಿರುವ ಚಿತ್ರ ರತ್ನ ಮಂಜರಿ. ಪ್ರಸಿದ್ಧ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಮೂವರು ಸಮಾನ ಮನಸ್ಕ ಎನ್ ಆರ್ ಐಗಳು ಸೇರಿ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಎಸ್ ಸಂದೀಪ್ ಕುಮಾರ್ ಕೂಡಾ ಒಬ್ಬರು. ಐಟಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರೋ ಅವರು ಎರಡು ಸಾಫ್ಟ್ವೇರ್ ಕಂಪೆನಿಗಳ ಮಾಲೀಕರು. ಆದರೂ ಕನ್ನಡತನ ಮತ್ತು ಸಿನಿಮಾ ವ್ಯಾಮೋಹವೆಂಬುದು ರತ್ನಮಂಜರಿಯೆಂಬ ವಿಭಿನ್ನ ಚಿತ್ರವೊಂದನ್ನು ನಿರ್ಮಾಣ ಮಾಡಲು ಅವರನ್ನು ಪ್ರೇರೇಪಿಸಿದೆ.
ಎಸ್ ಸಂದೀಪ್ ವಿದೇಶಗಳಲ್ಲಿ ಎರಡು ಸಾಫ್ಟ್ ವೇರ್ ಕಂಪೆನಿಗಳ ಒಡೆಯ. ಬೇರೆ ದೇಶಗಳಲ್ಲಿ ಬದುಕೋ ಬಹುತೇಕ ಕನ್ನಡಿಗರಂತೆ ಸದಾ ತಾಯ್ನೆಲದ ಧ್ಯಾನ ಹೊಂದಿರೋ ಅವರ ಪಾಲಿಗೆ ಆರಂಭದಿಂದಲೂ ಕೂಡಾ ಸಿನಿಮಾ ಕ್ಷೇತ್ರ ಸೆಳೆದುಕೊಂಡಿತ್ತು. ತಾಯ್ನಾಡಿನ ಜನರೊಂದಿಗೆ ಮುಖಾಮುಖಿಯಾಗಲು ಸಿನಿಮಾ ಪರಿಣಾಮಕಾರಿ ಮಾಧ್ಯಮ ಎಂದೂ ಅವರಿಗನ್ನಿಸಿತ್ತು. ಆದರೆ ಬಹು ಕಾಲದ ನಂತರ ಎನ್ ಆರ್ ಐಗಳ ಕೂಟದಿಂದಲೇ ಅವರ ಕನಸು ನನಸಾಗಿದೆ. ಅದರ ಫಲವಾಗಿಯೇ ಸಂದೀಪ್ ನಿರ್ಮಾಪಕರಲ್ಲೊಬ್ಬರಾಗಿರೋ ರತ್ನಮಂಜರಿ ತೆರೆ ಕಾಣಲು ರೆಡಿಯಾಗಿದೆ.
ಐಟಿ ವಲಯದಲ್ಲಿಯೇ ಇರುವ ನಟರಾಜ್ ಹಳೇಬೀಡು, ಡಾ. ನವೀನ್ ಜೊತೆ ಸೇರಿ ಸಂದೀಪ್ ಅವರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರೆಲ್ಲರೂ ನಿರ್ದೇಶಕ ಪ್ರಸಿದ್ಧ್ ಅವರ ಸಂಪರ್ಕಕ್ಕೆ ಬಂದ ನಂತರ ರತ್ನಮಂಜರಿ ಎಂಬ ಕಥೆ ಹೊಳಪು ಪಡೆದುಕೊಂಡಿದ್ದೇ ಒಂದು ಸೋಜಿಗ!
ಅಮೆರಿಕದಲ್ಲಿ ದಶಕಗಳ ಹಿಂದೆ ನಡೆದೊಂದು ಕಥೆಯ ಬೇಸಿನಲ್ಲಿ ರತ್ನಮಂಜರಿ ಚಿತ್ರದ ಕಥೆ ರೂಪುಗೊಂಡಿದೆ. ಅದು ಸಂದೀಪ್ ಸೇರಿದಂತೆ ನಿರ್ಮಾಪಕರೆಲ್ಲರ ಇಷಾರೆಯೊಂದಿಗೇ ರೆಡಿಯಾಗಿರೋ ಕಥೆ. ನಂತರ ಈ ಚಿತ್ರದ ಐವತ್ತರಷ್ಟು ಭಾಗದ ಕಥೆಯನ್ನು ಯುಎಸ್ ನಲ್ಲಿ ಮತ್ತುಳಿದ ಅರ್ಧ ಭಾಗವನ್ನು ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಡೀ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ.
ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಹೊಸತನವೇ ತುಂಬಿಕೊಳ್ಳಬೇಕೆಂಬುದು ಸಂದೀಪ್ ಅವರ ಇರಾದೆಯಾಗಿತ್ತು. ತಮ್ಮಂತೆಯೇ ಕಲೆಯ ಗುಂಗು ಹೊಂದಿದ್ದ ಹೊರನಾಡ ಕನ್ನಡಿಗರಿಗೂ ಅವಕಾಶ ಮಾಡಿಕೊಡಬೇಕೆಂಬ ಆಲೋಚನೆಯೂ ಅವರಲ್ಲಿತ್ತು. ಆದ್ದರಿಂದಲೇ ಈ ಚಿತ್ರದ ಪಾತ್ರಕ್ಕಾಗಿ ವಿದೇಶದಲ್ಲಿ ಆಡಿಷನ್ ಕರೆದಾಗ ಸಾವಿರಕ್ಕೂ ಹೆಚ್ಚು ಆಸಕ್ತರು ಮುಂದೆ ಬಂದಿದ್ದರು. ಕಡೆಗೂ ಅವರಲ್ಲಿ ಹತ್ತು ಮಂದಿಯನ್ನು ಆಯ್ಕೆ ಮಾಡಿ ನಟಿಸಲು ಅವಕಾಶ ಮಾಡಿ ಕೊಡಲಾಗಿದೆ. ಅವರೆಲ್ಲರೂ ವಿದೇಶದಲ್ಲಿಯೇ ರಂಗಭೂಮಿಯ ಸಖ್ಯ ಹೊಂದಿದ್ದವರು.
ಕಳೆದ ಆಗಸ್ಟ್ ತಿಂಗಳಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಾಡಿದ್ದ ಹಾಡೊಂದು ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು. ಈ ಮೂಲಕ ವಿದೇಶದಲ್ಲಿ ಆಡಿಯೋ ಲಾಂಚ್ ಮಾಡಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ರತ್ನಮಂಜರಿ ಪಾತ್ರವಾಗಿದೆ. ಇನ್ನು ಮಡಿಕೇರಿಯ ತಲಕಾವೇರಿಯಲ್ಲಿ ಚಿತ್ರೀಕರಣ ಮಾಡಿದ ಕಡೆಯ ಚಿತ್ರವಾಗಿಯೂ ರತ್ನಮಂಜರಿ ದಾಖಲಾಗಿದೆ. ಯಾಕೆಂದರೆ ಈ ಚಿತ್ರದ ಚಿತ್ರೀಕರಣವಾದ ಎರಡು ದಿನಗಳಲ್ಲಿಯೇ ರಾಜ್ಯ ಸರ್ಕಾರ ಇನ್ನು ಮುಂದೆ ಅಲ್ಲಿ ಯಾವ ಚಿತ್ರೀಕರಣವೂ ನಡೆಸುವಂತಿಲ್ಲ ಎಂಬ ಆದೇಶ ನೀಡಿತ್ತು!
ಹೀಗೆ ಚಿತ್ರೀಕರಣವೂ ಸೇರಿದಂತೆ ಎಲ್ಲದರಲ್ಲಿಯೂ ಅಚ್ಚರಿಗಳನ್ನು ಬಚ್ಚಿಟ್ಟುಕೊಂಡಿರೋ ಈ ಚಿತ್ರವನ್ನು ಎನ್ ಆರ್ ಐಗಳೇ ಸೇರಿ ನಿರ್ಮಾಣ ಮಾಡಿರೋದರಿಂದ ಆ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿವೆ. ಅದಕ್ಕೆ ತಕ್ಕುದಾಗಿಯೇ ಚಿತ್ರ ಮೂಡಿ ಬರಬೇಕೆಂಬ ಕಾರಣದಿಂದ ಸಂದೀಪ್ ಅವರ ಸಾರಥ್ಯದಲ್ಲಿ ತಾಂತ್ರಿಕವಾಗಿಯೂ ಈ ಚಿತ್ರ ಶ್ರೀಮಂತಿಕೆಯಿಂದ ಕೂಡಿದೆ. ವಿದೇಶದಲ್ಲಿಯೇ ಇದರ ಸಿಜಿ ಸೇರಿದಂತೆ ಅನೇಕ ಕಾರ್ಯಗಳು ನಡೆದಿವೆ. ಅದಕ್ಕೆ ಹಾಲಿವುಡ್ ಚಿತ್ರಗಳ ತಂತ್ರಜ್ಞರೇ ಕಾರ್ಯ ನಿರ್ವಹಿಸಿದ್ದಾರೆ. ಆದ್ದರಿಂದಲೇ ರೊಮ್ಯಾಂಟಿಕ್ ಥ್ರಿಲ್ಲರ್ ಕಥಾನಕ ಹೊಂದಿರೋ ರತ್ನಮಂಜರಿ ಹಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂತೆ ಮೂಡಿ ಬಂದಿದೆಯಂತೆ.
ಹೀಗೆ ಸಂದೀಪ್ ಅವರು ಸಾಲು ಸಾಲಾಗಿ ರತ್ನಮಂಜರಿಯ ವಿಶೇಷತೆಗಳನ್ನು ದಾಖಲಿಸುತ್ತಾರೆ. ಬೇರೆ ದೇಶದಲ್ಲಿ ಸಾಫ್ಟ್ ವೇರ್ ಜಗತ್ತಿನಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡಿದ್ದರೂ ಅವರ ಪಾಲಿಗೆ ಸಿನಿಮಾ ಎಂಬುದು ದೈವೀಕ ಸೆಳೆತ. ಅವರೊಳಗೆ ಲಾಭ ನಷ್ಟದ ವ್ಯಾಪಾರಿ ಮನೋಭಾವ ಮೀರಿದೊಂದು ಸಿನಿಮಾ ಪ್ರೀತಿಯಿದೆ. ಇಂಥಾ ಮನಸ್ಥಿತಿಯಿಂದಲೇ ರೂಪುಗೊಂಡಿರೋ ರತ್ನಮಂಜರಿ ಇದೇ ಮೇ ತಿಂಗಳಲ್ಲಿ ತೆರೆ ಕಾಣಲಿದೆ.