ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ತೀವ್ರ ತನಿಖೆಗೆ ಇಳಿದಿದ್ದು, ಇದೀಗ ಬಳ್ಳಾರಿಯಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಇಂದು (ಬುಧವಾರ) ಮುಂಜಾನೆ 4 ಗಂಟೆಗೆ ಶಬ್ಬೀರ್ ಎಂಬವನನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಯುವಕನಿಗೂ ಲಿಂಕ್ ಇದ್ಯಾ ಎಂಬ ಅನುಮಾನದ ಮೇಲೆ ಶಬ್ಬೀರ್ ನನ್ನು ತನಿಖೆಗೆ ಒಳಪಡಿಸಲಾಗಿದೆ.
ಶಂಕಿತ ಉಗ್ರ ಬಳ್ಳಾರಿಗೆ ಬಂದ ಸಮಯದಲ್ಲಿ ಕೌಲ್ ಬಜಾರ್ ನಿವಾಸಿ ಶಬ್ಬೀರ್ ನನ್ನು ಭೇಟಿ ಮಾಡಿದ್ದ. ಅಲ್ಲದೇ ಹೈದರಾಬಾದ್ಗೆ ಹೋಗಲು ಆತನಿಗೆ ಸಹಾಯ ಮಾಡಿದ್ದ ಎನ್ನುವ ಆರೋಪದ ಮೇಲೆ ಅಧಿಕಾರಿಗಳು ಶಬ್ಬೀರ್ ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಶಂಕಿತ ಉಗ್ರ ಹೈದರಾಬಾದ್ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಮಾ.1 ರಂದು ವೈಟ್ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು. ಬಳಿಕ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲಾಗಿದ್ದು, ಶಂಕಿತ ಉಗ್ರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಘಟನೆ ನಡೆದು ವಾರದ ಬಳಿಕ ಅಂದರೆ ಮಹಾಶಿವರಾತ್ರಿಯಂದು ಕೆಫೆಯನ್ನು ರೀ ಓಪನ್ ಮಾಡಲಾಗಿದೆ.