ರಾಮನಗರ: ಕರ್ತವ್ಯ ನಿರ್ವಹಿಸಲು ಪೊಲೀಸ್ ಠಾಣೆಗೆ ತೆರಳುತ್ತಿದ್ದ ಎಎಸ್ಐ ಅವರ ಹೋಂಡಾ ಆಕ್ಟೀವ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಲು ಕಟ್ ಆಗಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಎಸ್ಐ ಮಲ್ಲೇಶಯ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಚನ್ನಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಆಗಿದ್ದ ಮಲ್ಲೇಶಯ್ಯ ಕಳೆದ 3 ರಂದು ರಾತ್ರಿ ಕರ್ತವ್ಯಕ್ಕೆಂದು ಠಾಣೆಗೆ ತಮ್ಮ ಹೋಂಡಾ ಆಕ್ಟೀವ್ ಗಾಡಿಯಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಉದಯರಂಗ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಎಡಗಾಲು ಮಂಡಿಯಿಂದ ಕೆಳಗೆ ಕಟ್ ಆಗಿ ತೀವ್ರ ರಕ್ತಸ್ರಾವವಾಗಿತ್ತು. ಕಾಲು ಕಟ್ ಆಗಿ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ಎಎಸ್ಐ ಮಲ್ಲೇಶಯ್ಯರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೂಲತಃ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದ ರಾಯರದೊಡ್ಡಿ ನಿವಾಸಿಯಾಗಿರುವ ಮಲ್ಲೇಶಯ್ಯ ರಾಮನಗರದಲ್ಲಿಯೇ ವಾಸವಾಗಿದ್ದರು. ಸದ್ಯ ಅವರು ಮೂವರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಎಎಸ್ಐ ಮಲ್ಲೇಶಯ್ಯ ಸಾವಿನಿಂದಾಗಿ ಕುಟುಂಬದ ರೋಧನ ಮುಗಿಲು ಮುಟ್ಟುವಂತಿತ್ತು.
ಘಟನೆ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.