ಜೈಪುರ: ತಮ್ಮದೇ ಸರ್ಕಾರವನ್ನು ಟೀಕಿಸಿದ ರಾಜೇಂದ್ರ ಗುಧಾ ಅವರನ್ನು ಸಚಿವ ಸ್ಥಾನದಿಂದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ವಜಾಗೊಳಿಸಿದ್ದಾರೆ.
ರಾಜೇಂದ್ರ ಗುಧಾ (Rajendra Gudha) ಅವರು ಸೈನಿಕ ಕಲ್ಯಾಣ್, ಗೃಹರಕ್ಷಕ ದಳ ಮತ್ತು ನಾಗರಿಕಾ ರಕ್ಷಣೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ಗುಧಾ ಅವರು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕೆಲವೇ ಗಂಟೆಗಳ ಬಳಿಕ ಈ ಮಹತ್ತರ ಬೆಳವಣಿಗೆ ನಡೆದಿದೆ.
ಗುಧಾ ಹೇಳಿದ್ದೇನು..?: ಮಣಿಪುರದಲ್ಲಿ (Manipur Women) ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ರಾಜಸ್ಥಾನದ (Rajasthan) ಮಹಿಳೆಯರ ಮೇಲಿನ ಘಟನೆಗಳೊಂದಿಗೆ ರಾಜೇಂದ್ರ ಗುಧಾ ಹೋಲಿಕೆ ಮಾಡಿದ್ದರು. ರಾಜಸ್ಥಾನದಲ್ಲೂ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿವೆ ಎಂದು ಅಧಿವೇಶನದಲ್ಲಿ ಹೇಳಿದ್ದಾರೆ. ಮಣಿಪುರದ ಬದಲು ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಬೇರೆ ರಾಜ್ಯಗಳ ಬದಲು ಸ್ವಂತ ಹಿತ್ತಲನ್ನೇ ನೋಡಬೇಕು ಎಂದಿದ್ದರು.
ಗುಧಾ ಅವರ ಈ ಹೇಳಿಕೆಯನ್ನು ತಕ್ಷಣವೇ ಕಾಂಗ್ರೆಸ್ ಹೈಕಮಾಂಡ್ (Congress Highcommand) ಗಮನಕ್ಕೆ ತರಲಾಯಿತು. ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಅಶೋಕ್ ಗೆಹ್ಲೋಟ್, ಗುಧಾ ಅವರನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.
ವಜಾಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಧಾ, ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜಸ್ಥಾನ ನಂಬರ್ ಒನ್ ಸ್ಥಾನದಲ್ಲಿದೆ. ಅಷ್ಟಕ್ಕೂ ನಾನೇನು ಹೇಳಿದ್ದೆ..?. ಒಟ್ಟಿನಲ್ಲಿ ಸತ್ಯ ಹೇಳಿದ್ದಕ್ಕೆ ನನಗೆ ಶಿಕ್ಷೆಯಾಗಿದೆ ಎಂದು ಕಿಡಿಕಾರಿದ್ದಾರೆ.
Web Stories