ನವದೆಹಲಿ: ಈ ಬಾರಿಯ ಬಜೆಟ್ನಲ್ಲಿ ಏಮ್ಸ್ (AIIMS) ಘೋಷಣೆ ಮಾಡದ ಹಿನ್ನೆಲೆ ರಾಯಚೂರಿನ ಜಿಲ್ಲಾ ಏಮ್ಸ್ ಹೋರಾಟ ಸಮಿತಿ ದೆಹಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಧಾರವಾಡಕ್ಕೆ ಬೇಕು ಎನ್ನುವಂತಾಗಿದೆ. ಇತರೆ ಜಿಲ್ಲೆಗಳ ಬಗ್ಗೆಯೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಯೋಚಿಸಬೇಕು ಎಂದು ಸಮಿತಿಯ ಅಧ್ಯಕ್ಷ ಬಸವರಾಜ್ ಕಳಸ (Basavaraj Kalasa) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ್ ಕಳಸ, ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆ ರಾಯಚೂರಿಗೆ (Raichuru) ಏಮ್ಸ್ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವರಿಗೂ ಮನವಿ ಮಾಡಿದ್ದರು. ಆದರೂ ನಮ್ಮ ಮನವಿಗಳಿಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರಿಸಿದ್ದಾರೆ. ಇದನ್ನೂ ಓದಿ: ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ, ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶಪೂರ್ವಕ: ನಿರ್ಮಲಾ ಸೀತಾರಾಮನ್
ಈ ಬಾರಿಯ ಬಜೆಟ್ನಿಂದ ನಿರಾಸೆಯಾಗಿದೆ. ವಿಶೇಷವಾದ ಯಾವುದೇ ಘೋಷಣೆಗಳು ರಾಯಚೂರಿಗೆ ಬಂದಿಲ್ಲ. ಏಮ್ಸ್ ಬರೋವರೆಗೂ ನಾವು ಬಿಡುವುದಿಲ್ಲ. ರಾಜ್ಯಕ್ಕೆ ಬರುವ ಎಲ್ಲ ಯೋಜನೆಗಳು ಧಾರವಾಡಕ್ಕೆ ಬೇಕು ಎನ್ನುವಂತಾಗಿದೆ. ಐಐಟಿಯನ್ನು ಕಿತ್ತುಕೊಂಡು ಹೋದರು. ಸಚಿವ ಪ್ರಹ್ಲಾದ್ ಜೋಷಿ ಅವರು ರಾಯಚೂರಿನತ್ತವೂ ಗಮನ ಹರಿಸಬೇಕು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ರಾಯಚೂರಿನಲ್ಲಿ ತಾಯಿ ಶಿಶುವಿನ ಮರಣ ದರ ಹೆಚ್ಚಿದೆ. RTPS ಮತ್ತು YTPS ಸ್ಥಾವರಗಳ ಧೂಳಿನಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅತ್ಯುತ್ತಮ ಆಸ್ಪತ್ರೆ ಈ ಭಾಗಕ್ಕೆ ಅಗತ್ಯವಿದ್ದು, ಮನವಿಗೆ ಸ್ಪಂದಿಸಿ ಏಮ್ಸ್ ಘೋಷಣೆ ಮಾಡದಿದ್ದರೆ ಆಗಸ್ಟ್ನಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಭಾರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: Nepal Plane Crash; ಟೇಕಾಫ್ ವೇಳೆ ವಿಮಾನ ಪತನ – 18 ಮಂದಿ ದಾರುಣ ಸಾವು