ಯಾದಗಿರಿ: ದೇಶದ ಯುವಕರಿಗೆ ರಾಹುಲ್ ಗಾಂಧಿ (Rahul Gandhi) ಆದರ್ಶವಾಗಿದ್ದಾರೆ. ಜನರಿಗಾಗಿ ಅವರು ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಹೇಳಿದ್ದಾರೆ.
ಯಾದಗಿರಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಿದರು. ಈ ವೇಳೆ ಮೋದಿಯವರು (Narendra Modi) 10 ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಆದರೂ ಅವರು ರೈತರ ಹಿತ ಕಾಪಾಡಿಲ್ಲ. ಮೋದಿಯವರು ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಅವರು ಕರ್ನಾಟಕ ರಾಜ್ಯಕ್ಕೆ ಸಹಾಯ ಮಾಡಿಲ್ಲ. ರಾಜ್ಯದಲ್ಲಿ ಬರ ಆವರಿಸಿದ್ರು ಪರಿಹಾರ ನೀಡದೆ ಜನರಿಗೆ ಖಾಲಿ ಚೊಂಬು ನೀಡಿದ್ದಾರೆ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಹಣ ಬಿಡುಗಡೆ ಮಾಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಲ್ಕೈದು ವರ್ಷಗಳ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ? – ಪೆನ್ಡ್ರೈವ್ ಕೇಸ್ ಬಗ್ಗೆ ಹೆಚ್.ಡಿ ರೇವಣ್ಣ ಫಸ್ಟ್ ರಿಯಾಕ್ಷನ್
ಕೇಂದ್ರ ಬಿಜೆಪಿ (BJP) ಸರ್ಕಾರ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಮೀಸಲಾತಿ ರದ್ದು ಮಾಡುವ ಹುನ್ನಾರ ಮಾಡಿದೆ. ಇದಕ್ಕಾಗಿ 400 ಸ್ಥಾನ ಗೆಲ್ಲಿಸಿ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಮೋದಿ ಮುಖ ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ಹಾಗಾದರೆ ಬಿಜೆಪಿ ಪಕ್ಷದವರು ಕೈಲಾಗದವರಾ? ಈ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿಯನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಖರ್ಗೆಯವರ (Mallikarjun Kharge) ನಾಯಕತ್ವದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿದ ನಂತರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸಿ ರಾಜ್ಯದ ಜನರು ನನ್ನ ಹತ್ತಿರ ಬಂದ್ರೆ, ನಾನು ಹೈದ್ರಾಬಾದ್ನಲ್ಲಿಯೇ ಇರುತ್ತೇನೆ. ನಾನು ನಿಮ್ಮ ಸಹಾಯಕ್ಕೆ ಬರುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ: ಮೋದಿ