ಬೆಂಗಳೂರು: ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಪ್ರಸಾರ ಮಾಡಿದ ರಾಯಚೂರು ಸಿಇಓ ಕೂರ್ಮಾರಾವ್ ಪ್ರಕರಣದ ಸುದ್ದಿ ಇಂದು ಸದನದಲ್ಲಿ ಪ್ರತಿಧ್ವನಿಸಿದ್ದು, ಸಿಇಓ ವಿರುದ್ಧ ಎಲ್ಲ ಶಾಸಕರು ಪಕ್ಷಭೇದ ಮರೆತು ಚರ್ಚೆಯಲ್ಲಿ ಭಾಗವಹಿಸಿ ಕ್ರಮಕ್ಕೆ ಆಗ್ರಹಿಸಿದರು.
ಮೊದಲಿಗೆ ರಾಯಚೂರು ಜಿಲ್ಲೆಯ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಈ ಅಧಿಕಾರಿಯ ನಡವಳಿಕೆಯಿಂದ ರಾಜ್ಯದ ಜನರಿಗೆ ಅಪಮಾನವಾಗಿದೆ. ಇಂತಹ ಅಧಿಕಾರಿಗಳಿಗೆ ಬುದ್ಧಿಕಲಿಸಬೇಕು. ಕಾಲಿಗೆ ಬೂಟು ಹಾಕಿಕೊಂಡು ರೈತರ ಹೆಗಲ ಮೇಲೆ ಕುಳಿತುಕೊಂಡು ನಾಲೆ ದಾಟಿದ್ದಾರೆ. ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಸ್ಪೀಕರ್ ಕೋಳಿವಾಡ ಮಧ್ಯ ಪ್ರವೇಶಿಸಿ, ಇದೊಂದು ಅಮಾನವೀಯ ಘಟನೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಕ್ರಮಕೈಗೊಳ್ಳಿ ಎಂದು ಸರ್ಕಾರಕ್ಕೆ ಆದೇಶಿಸಿದರು.
ಇದೊಂದು ಅಮಾನವೀಯ ಘಟನೆಯಾಗಿದ್ದು ಇದೇನು ಗುಲಾಮಗಿರಿ ಅಂದ್ಕೊಂಡಿದ್ದಾರಾ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗರಂ ಆಗಿಯೇ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಪ್ರಕರಣದ ಬಗ್ಗೆ ಈಗಲೇ ವರದಿಯನ್ನು ಪಡೆದುಕೊಳ್ಳುತ್ತೇವೆ. ವರದಿ ಬಂದ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಇಓ ಕೂರ್ಮರಾವ್ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಕೊಳಚೆ ದಾಟಲು ಹಿಂಜರಿದ ಅಧಿಕಾರಿಯನ್ನು ಹೊತ್ಕೊಂಡು ಹೋದ ಗ್ರಾಮಸ್ಥರು!