ಬೆಂಗಳೂರು: ಇಂದು ಬೆಂಗಳೂರು ರಸ್ತೆಗೆ ಇಳಿಯುವ ಮುನ್ನ ಎಚ್ಚರದಿಂದಿರಿ, ಯಾಕೆಂದರೆ ಸಿಲಿಕಾನ್ ಸಿಟಿಗೆ ಇಂದು ಟ್ರಾಫಿಕ್ ಬಿಸಿ ತಟ್ಟಲಿದೆ.
ಹೌದು. ಉತ್ತರ ಕರ್ನಾಟಕ ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಸುಮಾರು 37 ಉತ್ತರ ಕರ್ನಾಟಕ ಸಂಘ ಸಂಸ್ಥೆಗಳು ಪರಿಹಾರ ಕೊಡದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಬೀದಿಗಿಳಿಯಲಿದೆ. ರಾಮ ಮಂದಿರ ಗ್ರೌಂಡ್ನಲ್ಲಿ ಇಂದು ಶಂಕರ್ ಬಿದರಿ ಬೃಹತ್ ರ್ಯಾಲಿಗೆ ಚಾಲನೆ ಕೊಡಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ರಾಮ ಮಂದಿರದಿಂದ ಫ್ರೀಡಂ ಪಾರ್ಕ್ ನವರೆಗೆ ಮೆರವಣಿಗೆ ನಡೆಸಲಿದ್ದಾರೆ. ತದನಂತರ ಸಿಎಂ ಯಡಿಯೂರಪ್ಪ ಅವರಿಗೆ ಹಾಗೂ ರಾಜ್ಯಪಾಲರಿಗೆ ಪ್ರವಾಹ ಪರಿಹಾರ ನೀಡಿ ಎಂದು ಮನವಿ ಪತ್ರವನ್ನು ನೀಡಲಿದ್ದಾರೆ.
ರಾಜಧಾನಿಯ ಬಹುತೇಕ ಕಡೆ ಟ್ರಾಫಿಕ್ ಜಾಮ್ ಆಗಲಿದೆ. ರಾಜಾಜಿನಗರ ರಾಮಮಂದಿರದಲ್ಲಿ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಿ ಭಾಷಂ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಮುಂದೆ ಸಾಗಲಿದೆ. ತದನಂತರ ರ್ಯಾಲಿ ಸುಜಾತ ಥಿಯೇಟರ್ ಮೂಲಕ ಸಾಗಿ, ಒಕುಳಿಪುರಂ, ಶೇಷಾದ್ರಿಪುರಂ, ಕೆಜಿರೋಡ್ ಮೂಲಕ ಫ್ರೀಡಂಪಾರ್ಕ್ ತಲುಪಲಿದೆ. ಹೀಗಾಗಿ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಾಗುವ ಕಾರಣಕ್ಕೆ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದ್ದು, ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಲಿದೆ.