ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

Public TV
3 Min Read
Narendra Modi 6

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ತರಲು ಕೇಂದ್ರ ಸರ್ಕಾರ (Union Government) ಭರ್ಜರಿ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಆನ್ಲೈನ್ ಮೂಲಕ ರಾಷ್ಟ್ರೀಯ ಕಾನೂನು ಆಯೋಗ ಸಲಹೆಗಳನ್ನು ನೀಡಲು ಮನವಿ ಮಾಡಿದೆ. ಮಂಗಳವಾರ ಭೂಪಾಲ್ ನಲ್ಲೂ ಈ ಬಗ್ಗೆ ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸ ಕಾನೂನು ಹೆಸರಿನಲ್ಲಿ ಜನರನ್ನ ಪ್ರಚೋದಿಸಲಾಗುತ್ತಿದೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Asaduddin Owaisi

ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಲು ಆರಂಭಿಸಿವೆ. ಮಣಿಪುರದಲ್ಲಿನ ಹಿಂಸಾಚಾರ ವಿಷಯದಲ್ಲಿ ಪ್ರಧಾನಿ ಮೌನ, ಬೆಲೆ ಏರಿಕೆ ಮತ್ತು ನಿರುದ್ಯೋಗ ಪ್ರಸ್ತಾಪಿಸಿ ಕಾಂಗ್ರೆಸ್, ಡಿಎಂಕೆ ಮತ್ತು ಎಐಎಂಐಎಂ ಸೇರಿದಂತೆ ಹಲವು ವಿರೋಧ ಪಕ್ಷಗಳು ಪ್ರತ್ಯೇಕ ಹೇಳಿಕೆಗಳನ್ನು ನೀಡಿವೆ. ಇದನ್ನೂ ಓದಿ: ವಿಪಕ್ಷ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ – ವಿರೋಧ ಪಕ್ಷದ ವಿರುದ್ಧ ಮೋದಿ ಕಿಡಿ

ಏಕರೂಪ ನಾಗರಿಕ ಸಂಹಿತೆ ಪ್ರಶ್ನಿಸಿರುವ ಕಾಂಗ್ರೆಸ್‌ನ (Congress) ಮಿತ್ರ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (DMK) ಮೊದಲು ಹಿಂದೂಗಳಿಗೆ ಏಕರೂಪದ ಕೋಡ್ ಅನ್ನು ಅನ್ವಯಿಸಬೇಕು ಎಂದು ಆಗ್ರಹಿಸಿದೆ. ದೇಶದ ಎಲ್ಲ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಸಂವಿಧಾನವು (Constitution) ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ನೀಡಿರುವುದರಿಂದ ನಮಗೆ UCC (ಏಕರೂಪ ನಾಗರಿಕ ಸಂಹಿತೆ) ಬೇಡ ಎಂದು ಡಿಎಂಕೆಯ ಟಿಕೆಎಸ್ ಇಳ್ಳಂಗೋವನ್ ಹೇಳಿದ್ದಾರೆ.

KC Venugopal

ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ AICC ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal), ಪ್ರಧಾನಿ ಇತರ ಸಮಸ್ಯೆಗಳಿಂದ ಜನರನ್ನು ವಿಚಲಿತಗೊಳಿಸುತ್ತಿದ್ದಾರೆ. ದೇಶದಲ್ಲಾಗುತ್ತಿರುವ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಅವರು ಮೊದಲು ಉತ್ತರಿಸಬೇಕು. ಅವರು ಮಣಿಪುರ ಸಮಸ್ಯೆಗಳ ಬಗ್ಗೆ ಎಂದಿಗೂ ಮಾತನಾಡಿಲ್ಲ, ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ. ಆದ್ರೆ ಅವರು ಈ ಎಲ್ಲಾ ಸಮಸ್ಯೆಗಳಿಂದ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಕುಟುಂಬ ಮತ್ತು ರಾಷ್ಟ್ರದ ನಡುವಿನ ಹೋಲಿಕೆ ಸೂಕ್ತವಲ್ಲ ಮತ್ತು ಅದನ್ನ ಯಾರ ಮೇಲೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಕುಟುಂಬದಲ್ಲಿಯೂ ವೈವಿಧ್ಯತೆ ಇರುತ್ತದೆ. ಭಾರತದ ಸಂವಿಧಾನವು ದೇಶದ ಜನರಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನ ಗುರುತಿಸಿದೆ. ಯುಸಿಸಿ ಒಂದು ಮಹತ್ವಾಕಾಂಕ್ಷಿಯಾಗಿದೆ. ಅಜೆಂಡಾ-ಚಾಲಿತ ಬಹುಮತದ ಸರ್ಕಾರದಿಂದ ಇದನ್ನು ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:  ಮಣಿಪುರ ಹಿಂಸಾಚಾರದ ಹಿಂದೆ ಇದೆ ವಿದೇಶಿ ಶಕ್ತಿಗಳ ಕೈವಾಡ

NARENDRA MODI 5

ಇದು ದೇಶದ ಬಹುತ್ವ ಮತ್ತು ವೈವಿಧ್ಯತೆಯ ಮೇಲಿನ ದಾಳಿ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಭಾರತದ ಪ್ರಧಾನಿ ಭಾರತದ ವೈವಿಧ್ಯತೆ ಮತ್ತು ಅದರ ಬಹುತ್ವವನ್ನು ಒಂದು ಸಮಸ್ಯೆ ಎಂದು ಪರಿಗಣಿಸುತ್ತಾರೆ. UCC ಮೂಲಕ ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಕಸಿದುಕೊಳ್ಳುತ್ತೀರಾ? UCC ಕುರಿತು ಮಾತನಾಡುವಾಗ ಅವರು ಹಿಂದೂಗಳ ಬಗ್ಗೆ ಮಾತನಾಡುತ್ತಾರೆ. ಅವರು ಹಿಂದೂ ಅವಿಭಜಿತ ಕುಟುಂಬವನ್ನ ರದ್ದುಗೊಳಿಸುತ್ತಾರಾ? ಹೋಗಿ ಪಂಜಾಬ್‌ನಲ್ಲಿರುವ ಸಿಖ್ಖರಿಗೆ ಯುಸಿಸಿ ಬಗ್ಗೆ ಹೇಳಿ, ಅಲ್ಲಿ ಪ್ರತಿಕ್ರಿಯೆ ಏನಾಗುತ್ತದೆ ಎಂದು ನೋಡಿ ಎಂದು ಓವೈಸಿ ಸವಾಲ್‌ ಹಾಕಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದೆ. ಮಂಗಳವಾರ ರಾತ್ರಿ ನಡೆದ ಆನ್‌ಲೈನ್ ತುರ್ತು ಸಭೆಯಲ್ಲಿ ರಾಷ್ಟ್ರವ್ಯಾಪಿ UCC ಅನುಷ್ಠಾನ ವಿರೋಧಿಸಲು ನಿರ್ಧಾರ ಮಾಡಿದ್ದು, ಸಭೆಯಲ್ಲಿ ಷರಿಯಾದ ಪ್ರಮುಖ ಭಾಗಗಳೊಂದಿಗೆ ಕರಡನ್ನು ಕಾನೂನು ಆಯೋಗದ ಮುಂದೆ ಮಂಡಿಸಲು ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಕರಡು ಸಲ್ಲಿಕೆಗೆ ಕಾನೂನು ಆಯೋಗದ ಅಧ್ಯಕ್ಷರ ಭೇಟಿಗೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಮಯ ಕೇಳಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

Share This Article