ಧಾರವಾಡ: ಕಾಂಗ್ರೆಸ್ ಪಕ್ಷಕ್ಕೆ ಜನ ಹಿತ ಏನು ಹಾಗೂ ಜನ ಎಲ್ಲಿ ಹೋಗಿ ವೋಟು ಹಾಕಿದ್ರು ಅಂತಾ ಗೊತ್ತಿಲ್ಲ. ದೇಶದಲ್ಲಿ 29 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಅದರಲ್ಲಿ ಎನ್ಡಿಎ ಮೈತ್ರಿ ಕೂಟ 12 ಸ್ಥಾನಗಳನ್ನು ಗೆದ್ದಿದೆ. ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡ ರಾಹುಲ್ ರೀತಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನ ಎರಡು ಕಡೆ ಗೆದ್ದಿದ್ದು ಬಿಟ್ಟರೆ ಸಮಗ್ರ ಪಾಲು ಇಲ್ಲ. ನಾವು ತೆಲಂಗಾಣ, ಕರ್ನಾಟಕ, ಉತ್ತರ ಈಶಾನ್ಯದಲ್ಲಿ ಗೆದ್ದಿದ್ದೇವೆ. ಮಧ್ಯಪ್ರದೇಶ ಹಾಗೂ ಹಿಂದಿನ ಚುನಾವಣೆಯಲ್ಲಿ ಯುಪಿಯಲ್ಲಿ ಕೂಡಾ ಗೆದ್ದಿದ್ದೇವೆ. ಆಗಲೂ ಸಹಿತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಲ್ಲಿತ್ತು. ತೈಲ ಬೆಲೆ ಕಂಟ್ರೋಲ್ ಆಗಿರುವಂತದ್ದು ಕಾಂಗ್ರೆಸ್ ಸಮಯದಲ್ಲಿ, ಇವತ್ತಿನ ಅಂತರಾಷ್ಟ್ರೀಯ ಬೆಲೆ ಪ್ರಕಾರ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ನಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒತ್ತಡ ಹಾಕುತಿದ್ದೇವೆ ಎಂದರು. ಇದನ್ನೂ ಓದಿ: ಉಪಚುನಾವಣೆ ಗೆದ್ದರೆ ನಾವು ಭಾರೀ ಬೀಗಬಾರದು, ಸೋತರೆ ಧೃತಿಗೆಡಬಾರದು: ಜೋಶಿ
ತೆರಿಗೆ ಕಡಿಮೆ ಮಾಡಿ ನಾವು ಪೆಟ್ರೋಲ್ ಹಾಗೂ ಡೀಸೆಲ್ ಕೊಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ಒಂದು ಪೈಸೆ ದರ ಕಡಿಮೆಯಾಗಿಲ್ಲ. ಡಿಕೆಶಿ ಹಾಗೂ ರಾಹುಲ್ ಗಾಂಧಿ ಅವರನ್ನು ನಾನು ಪ್ರಶ್ನೆ ಮಾಡುತ್ತೇನೆ. ಚುನಾವಣೆ ಫಲಿತಾಂಶ ಅವರ ಪರ ಬಂದಿದೆ ಎಂದರೆ ಅವರು ದರ ಕಡಿಮೆ ಮಾಡುವುದಿಲ್ಲವೇ? ಡಿಕೆಶಿ ಹಲವು ಖಾತೆ ನಿರ್ವಹಣೆ ಮಾಡಿವರು. ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು. ಆದರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ರಾಹುಲ್ ರೀತಿ ಯಾಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.
ಮನೆಯಲ್ಲಿ ತಿಳುವಳಿಕೆ ಇಲ್ಲದವರಿಗೆ ಸ್ವಲ್ಪ ವಿನಾಯ್ತಿ ನೀಡಬಹುದು. ಆದರೆ ನೀವು ರಾಹುಲ್ ರೀತಿ ಅಲ್ಲ, ಸ್ವಲ್ಪ ಪ್ರಬುದ್ಧರಾಗಿ ಮಾತನಾಡಿ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ತೈಲ ದರ ರಾಹುಲ್ ಗಾಂಧಿಗೆ ಕೇಳಿ ಕಡಿಮೆ ಮಾಡ್ತಿರಾ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ ಜೋಶಿ, ನಾವು ಅಲ್ಪ ಸಂಖ್ಯಾತರ, ಬಹುಸಂಖ್ಯಾತರ ಪರ ಅಲ್ಲ. ನಾವು ತುಷ್ಟಿಕರಣ ರಾಜಕಾರಣ ಮಾಡಲ್ಲ. ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿ ಅವರು ತುಷ್ಟಿಕರಣ ಮಾಡುತ್ತಿದ್ದಾರೆ. ಆದರೆ ನಮ್ಮದು ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ