ಬೆಂಗಳೂರು: ಪುನೀತ್ ರಾಜ್ಕುಮಾರ್ ನಿಧನರಾದ ನಂತರ ಜಯದೇವ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಶೇ.30ರಷ್ಟು ಹೆಚ್ಚಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯಲು ಜಯದೇವ ಆಸ್ಪತ್ರೆಗೆ ಬರುತ್ತಿರೋ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದರು. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ
ಸಾಮಾನ್ಯವಾಗಿ ಜಯದೇವ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ 1200 ಇರುತ್ತಿತ್ತು. ಆದರೆ ಈಗ ಹೊರ ರೋಗಿಗಳ ಸಂಖ್ಯೆ 1700ರಿಂದ 1800ಗೆ ಏರಿಕೆ ಆಗಿದೆ. ನವೆಂಬರ್ ಮೊದಲ ಮತ್ತು ಎರಡನೇ ವಾರದ ನಂತರ ರೋಗಿಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ನಿನ್ನೆ ಹಬ್ಬದ ದಿನ ಕೂಡ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಸಾಮಾನ್ಯವಾಗಿ ಹಬ್ಬದ ದಿನ 600 ಜನ ಹೊರ ರೋಗಿಗಳ ವಿಭಾಗಕ್ಕೆ ಬರುತ್ತಾರೆ. ಆದರೆ ನಿನ್ನೆ ಹಬ್ಬ ಇದ್ದರೂ 1000 ಜನ ಬರುತ್ತಿದ್ದಾರೆ. ವಯಸ್ಕರು, ವಯಸ್ಸಾದವರು ಕೂಡ ಚೆಕಪ್ಗೆ ಬರುತ್ತ ಇದ್ದಾರೆ ಎಂದು ಹೇಳಿದರು.
1800 ರೋಗಿಗಳಲ್ಲಿ 900 ರೋಗಿಗಳು ರೊಟೀನ್ ಚೆಕಪ್ಗೆ ಬರುವವರು, ಉಳಿದ 900 ರೋಗಿಗಳು ಹೊಸಬರು ಭಯ, ಆತಂಕದಿಂದ ಚೆಕಪ್ಗೆ ಬಂದಿದ್ದಾರೆ. ಆದರೆ ಅವರು ಯಾವಾಗಲೋ ಒಂದು ಸಲ ಬಂದರೆ ಆಗಲ್ಲ, ಪ್ರತಿ ವರ್ಷ ಚೆಕ್ ಮಾಡಿಸಬೇಕು ಎಂದು ಸಲಹೆಯನ್ನೂ ಅವರು ಇದೇ ವೇಳೆ ನೀಡಿದರು. ಇದನ್ನೂ ಓದಿ: ‘ಅಪ್ಪು’ ಸವಿನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ