ಉಡುಪಿ: ಪೊಲೀಸ್ ಇಲಾಖೆಯಲ್ಲಿ ಇನ್ನೂ ಬ್ರಿಟಿಷ್ ಸಿಸ್ಟಮ್ ಇದೆ. ಪೊಲೀಸ್ ಇಲಾಖೆಯಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿದೆ. ಆರೋಗ್ಯ, ಆರ್ಥಿಕ ಸಮಸ್ಯೆ ಜೊತೆ ಆರ್ಡರ್ ಸಿಸ್ಟಮ್ ಮತ್ತು ಪೊಲೀಸ್ ಕಿರುಕುಳ ಇದಕ್ಕೆ ಕಾರಣ ಎಂದು ನಿವೃತ್ತ ಪೊಲೀಸ್ ಸಂದೀಪ್ ಆರೋಪಿಸಿದ್ದಾರೆ.
ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ತನ್ನ ಕರ್ತವ್ಯಕ್ಕೆ ಕೊಟ್ಟ 303 ರೈಫಲ್ನಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಗಳ ಕೊಠಡಿಗೆ ಬೆಂಗಾವಲಾಗಿದ್ದ ರಾಜೇಶ್ ಕುಂದರ್ ಬೆಳಗಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಇದೆ. ಮೃತದೇಹದ ಅಂತಿಮ ದರ್ಶನ ಪಡೆದ ಸಂದೀಪ್ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮೇಲಿಂದ ಮೇಲೆ ಅವಘಡಗಳು ನಡೆಯುತ್ತಿದ್ದರೂ ಗೃಹ ಸಚಿವರು, ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಉತ್ತರ ಪತ್ರಿಕೆ ಬಂದೋಬಸ್ತ್ನಲ್ಲಿದ್ದ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ
75 ವರ್ಷದ ಹಿಂದೆ ಬ್ರಿಟಿಷರು ಭಾರತ ಬಿಟ್ಟು ಹೋದರೂ, ಪೊಲೀಸ್ ಅಧಿಕಾರಿಗಳು ಬ್ರಿಟಿಷರ ಮನಸ್ಥಿತಿಯಲ್ಲಿದ್ದಾರೆ. ರಾಜ್ಯದಲ್ಲಿ 250ಕ್ಕಿಂತ ಹೆಚ್ಚು ಪೊಲೀಸರ ಆತ್ಮಹತ್ಯೆಗಳು ನಡೆದಿದೆ. ಇಷ್ಟೆಲ್ಲ ಬೆಳವಣಿಗೆಗಳು ಆದರೂ ಯಾರೂ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಂಬಳ ಜಾಸ್ತಿ ಆಗಲಿಲ್ಲ ಎಂದಾಗ ನಾವು ಭತ್ಯೆ ಜಾಸ್ತಿ ಮಾಡುತ್ತೇವೆ ಎಂಬ ಉತ್ತರ ಕೊಡುತ್ತಾರೆ. ಆತ್ಮಹತ್ಯೆಗಳು ಸಾವುಗಳು ಆದರೆ ಮಾತ್ರ ಅದರ ಬಗ್ಗೆ ಚಿಂತನೆ ನಡೆಸಬೇಕಾಗಿರುವುದು ದುರ್ದೈವ. ಹಿರಿಯ ಅಧಿಕಾರಿಗಳ ಆರ್ಡರ್ ಕೆಲಸ ಕೊಟ್ಟು ಮಾನಸಿಕ ಹಿಂಸೆ ಕೊಡುವುದು ನಿಲ್ಲಬೇಕು. ಪೊಲೀಸ್ ಇಲಾಖೆಯ ಸಮಸ್ಯೆಗಳನ್ನು ಹೇಳುವುದು ಬೋರು ಕಲ್ಲಿನ ಮೇಲೆ ನೀರು ಸುರಿದಂತೆ ಎಂದು ಸಂದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರ ಅನಕ್ಷರಸ್ಥನೆಂದು ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು!
ಸಣ್ಣಪುಟ್ಟ ವಿಚಾರಕ್ಕೆ ರಾಜೇಶ್ ಅವರನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡಿದ್ದಾರೆ. ಆರ್ಥಿಕವಾಗಿ ರಾಜೇಶ್ಗೆ ಸಮಸ್ಯೆ ಇರಲಿಲ್ಲ. ಮಾನಸಿಕವಾಗಿ ಕರ್ತವ್ಯ ವಿಚಾರದಲ್ಲಿ ಬಹಳ ಖಿನ್ನರಾಗಿದ್ದರು. ಸಸ್ಪೆಂಡ್ ಮಾಡುವುದು, ರಜೆ ಕೊಡದೆ, ಪೊಲೀಸ್ ಕೆಲಸ ಹೊರತಾದ ಕೆಲಸಗಳನ್ನು ನಿಗದಿ ಮಾಡುವ ಬೆಳವಣಿಗೆಗಳ ಕುರಿತಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ.