ನವದೆಹಲಿ: ಮಾನವ ಹಕ್ಕುಗಳ ಬಗ್ಗೆ ಕೆಲವರ ‘ಆಯ್ದ ವ್ಯಾಖ್ಯಾನ’ದಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 28ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭ ಮತ್ತು ನಷ್ಟದ ಮೇಲೆ ಕಣ್ಣಿಟ್ಟು ಕೆಲವರು ಮಾನವ ಹಕ್ಕುಗಳ ಬಗ್ಗೆ ವಾಖ್ಯಾನ ಮಾಡುತ್ತಾರೆ. ಈ ರೀತಿ ವಾಖ್ಯಾನ ಮಾಡುವುದು ಮಾನವ ಹಕ್ಕುಗಳಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Addressing the 28th NHRC Foundation Day programme. https://t.co/IRSPnXh2qP
— Narendra Modi (@narendramodi) October 12, 2021
ಕೆಲವರು ಎಲ್ಲ ಘಟನೆಗಳನ್ನು ಪರಿಗಣಿಸದೇ ತಮಗೆ ಬೇಕಾದ ಆಯ್ದ ಘಟನೆಗಳಲ್ಲಿ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಗಮನಿಸುತ್ತಾರೆ ಎಂದು ಹೇಳುವ ಮೂಲಕ ದೇಶದಲ್ಲಿ ಮಾನವ ಹಕ್ಕುಗಳ ಬಗ್ಗೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡುವವರ ವಿರುದ್ಧ ಮೋದಿ ಕಿಡಿಕಾರಿದರು. ಇದನ್ನೂ ಓದಿ: ಉಚಿತ ಕೊರೊನಾ ಲಸಿಕೆ ನೀಡಿದ್ದಕ್ಕೆ ಪೆಟ್ರೋಲ್ ಬೆಲೆ ಹೆಚ್ಚಳ: ಸಚಿವ ತೇಲಿ
The Mantra of 'Sabka Saath, Sabka Vikas, Sabka Vishwas, Sabka Prayas' guarantees human rights to every person. pic.twitter.com/PWh22ubRAl
— Narendra Modi (@narendramodi) October 12, 2021
ಕೆಲವರು ಮಾನವ ಹಕ್ಕುಗಳ ಉಲ್ಲಂಘನೆಯ ಹೆಸರಿನಲ್ಲಿ ದೇಶದ ಪ್ರತಿಷ್ಠೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಜನರು ಅಂಥವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಸಂಘಟನೆ, ವ್ಯಕ್ತಿಗಳ ಹೆಸರನ್ನು ನೇರವಾಗಿ ಹೇಳದೇ ಇದ್ದರೂ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಭಾರತದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂದು ಹೇಳುವವರ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಶೇಷವಾಗಿ ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಕ್ರಮವನ್ನು ಕೆಲವರು ಟೀಕಿಸಿ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಟೀಕಿಸಿದವರು ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ ಪಂಡಿತರು ಮತ್ತು ಸಿಖ್ ಸಮುದಾಯದ ಮೇಲೆ ನಡೆದ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿರುವುದನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಈ ವಿಚಾರ ಚರ್ಚೆ ಆಗುತ್ತಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಮಾನವ ಹಕ್ಕುಗಳ ಬಗ್ಗೆ ಆಯ್ದ ವಾಖ್ಯಾನ ಮಾಡುತ್ತಿರುವ ಜನರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.