ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ (Tarique Rahman) ಅವರಿಗೆ ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (PM Modi) ಆಹ್ವಾನ ನೀಡಿದ್ದಾರೆ.
ರೆಹಮಾನ್ ಅವರಿಗೆ ಬರೆದ ಪತ್ರದಲ್ಲಿ, ಪ್ರಧಾನಿ ಮೋದಿ ಅವರು ಎರಡೂ ರಾಷ್ಟ್ರಗಳ ನಡುವಿನ ಬಹುಮುಖಿ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಬಿಎನ್ಪಿ ನಾಯಕರೊಂದಿಗೆ ನಿಕಟವಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಪ್ರಧಾನಿಯಾಗಿ ತಾರೀಖ್ ರೆಹಮಾನ್ ಪ್ರಮಾಣವಚನ – ಹಿಂದೂ ಸಂಸದನಿಗೂ ಮಂತ್ರಿಸ್ಥಾನ
ಎರಡು ಆಪ್ತ ನೆರೆಹೊರೆಯವರಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಾಂಸ್ಕೃತಿಕ ಸಂಬಂಧಗಳು, ಶಾಂತಿ ಮತ್ತು ಸಮೃದ್ಧಿಯ ಜನರ ಆಕಾಂಕ್ಷೆಗಳ ಮೇಲೆ ಸ್ಥಾಪಿತವಾದ ಸ್ನೇಹವನ್ನು ಹೊಂದಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಚುನಾವಣಾ ಗೆಲುವಿಗೆ ರೆಹಮಾನ್ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಈ ಗೆಲುವು ಬಾಂಗ್ಲಾದೇಶದ ಜನರು ಅವರ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ ಎಂದು ಬಣ್ಣಿಸಿದರು. ದೇಶವನ್ನು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುವ ರೆಹಮಾನ್ ಅವರ ದೃಷ್ಟಿಕೋನಕ್ಕೆ ಸಾರ್ವಜನಿಕ ಬೆಂಬಲವನ್ನು ಈ ಜನಾದೇಶ ಪ್ರತಿನಿಧಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಫೆ.17 ರಂದು ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣ ಸ್ವೀಕಾರ – ಮೋದಿಗೆ ಆಹ್ವಾನ
ಸಂಪರ್ಕ, ವ್ಯಾಪಾರ, ತಂತ್ರಜ್ಞಾನ, ಶಿಕ್ಷಣ, ಕೌಶಲಾಭಿವೃದ್ಧಿ, ಇಂಧನ, ಆರೋಗ್ಯ ರಕ್ಷಣೆ, ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ವಿನಿಮಯ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಬಾಂಗ್ಲಾದೇಶದ ಜೊತೆ ಸಹಕಾರವನ್ನು ಹೆಚ್ಚಿಸುವತ್ತ ಗಮನಹರಿಸುವುದಾಗಿ ಪ್ರಧಾನಿ ಹೇಳಿದ್ದಾರೆ.

