ಕೋಲ್ಕತ್ತಾ: ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ (INDIA Block) ರಹಸ್ಯವಾಗಿ ಭ್ರಷ್ಟಾಚಾರಗಳಲ್ಲಿ ತೊಡಗಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷ ಹಗರಣ ಮಾಡುವುದನ್ನೇ ಫುಲ್ ಟೈಮ್ ಬಿಸಿನೆಸ್ ಆಗಿ ಮಾಡಿಕೊಂಡಿದೆ ಎಂದು ಪ್ರಧಾನಿ ಮೋದಿ (Narendra Modi) ಕಿಡಿ ಕಾರಿದ್ದಾರೆ.
4ನೇ ಹಂತದ ಮತದಾನಕ್ಕೂ ಮುನ್ನಾದಿನ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ನಾಲ್ಕು ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸರ್ಕಾರ ಹಾಗೂ ಇಂಡಿಯಾ ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿಯಂಥ ವ್ಯಕ್ತಿಯೊಂದಿಗೆ ಚರ್ಚಿಸಲು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? – ಸ್ಮೃತಿ ಇರಾನಿ ವ್ಯಂಗ್ಯ
ಹಗರಣ ಮಾಡುವುದನ್ನೇ ಟಿಎಂಸಿ ಪೂರ್ಣ ಸಮಯದ ವ್ಯವಹಾರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ (Congress), ಇಂಡಿಯಾ ಒಕ್ಕೂಟ ಯಾವುದೇ ಪಕ್ಷವಾಗಿರಲಿ. ಅವರೆಲ್ಲರಿಗೂ ಭ್ರಷ್ಟಾಚಾರ ಮಾಡುವುದು ಸಾಮಾನ್ಯ ಗುಣವಾಗಿಬಿಟ್ಟಿದೆ. ಇಂಡಿಯಾ ಒಕ್ಕೂಟದಲ್ಲಿ ಹೆಚ್ಚಿನ ಮಿತ್ರಪಕ್ಷಗಳು ರಹಸ್ಯವಾಗಿ ಹಗರಣಗಳನ್ನು ಮಾಡುತ್ತಿದ್ದರೆ, ಟಿಎಂಸಿ ಮುಕ್ತ ಉದ್ಯಮವನ್ನಾಗಿಯೇ ಅದನ್ನು ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
25,000 ಸಾವಿರ ಶಿಕ್ಷಕರ ನೇಮಕಾತಿ ಹಗರಣ, ಪೊಂಜಿ ಹಗರಣ, ಕಲ್ಲಿದ್ದಲು ಹಗರಣ, ಚಿಟ್ ಫಂಡ್ ಹಗರಣ, ಪಡಿತರ ಹಗರಣ ಮಾಡಿರುವ ಟಿಎಂಸಿ ರೈತರನ್ನೂ ಬಿಡದೇ ಲೂಟಿ ಮಾಡಿದೆ ಎಂದು ಕೆಂಡಾಮಂಡಲವಾಗಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ – ಚುನಾವಣಾಧಿಕಾರಿಗಳ ವಿರುದ್ಧ `ಕೈ’ ಕಿಡಿ!
ಮೋದಿ ಸರ್ಕಾರವಿಂದು ಪ್ರತಿಯೊಬ್ಬ ನಾಗರಿಕನ ಮನೆ ಬಾಗಿಲನ್ನು ತಲುಪುತ್ತಿದೆ. ಈ ಹಿಂದಿನ ಪಕ್ಷಗಳು ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತಿದ್ದರು. ಗೆದ್ದು ಅಧಿಕಾರಕ್ಕೆ ಬಂದ ಮೇಲೆ ನೀವು ಅಲೆದಾಡಬೇಕಿತ್ತು. ಸಹಾಯ ಕೇಳಿಕೊಂಡು ಮನೆ ಬಳಿ ಹೋದರೆ ನಿಮ್ಮ ಗುರುತೇ ಅವರಿಗೆ ಸಿಗುತ್ತಿರಲಿಲ್ಲ. ಆದ್ರೆ ಇಂತಹ ಆಲೋಚನೆಗಳನ್ನು ಮೋದಿ ಸರ್ಕಾರ ಬದಲಾಯಿಸಿದೆ. ಪ್ರತಿಯೊಬ್ಬ ನಾಗರಿಕನ ಮನೆ ಬಾಗಿಲನ್ನೂ ತಲುಪುತ್ತಿದೆ. ಇದೇ ದೇಶದ ಅಭಿವೃದ್ಧಿಗೆ ಕಾರಣ ಎಂದು ಹೇಳಿದ್ದಾರೆ.
ಸೋಮವಾರ (ಮೇ 13) 4ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದನ್ನೂ ಓದಿ: ‘ಲೋಕ’ ಚುನಾವಣೆಯಲ್ಲಿ ಎಎಪಿ ಗೆದ್ದರೆ ವಿದ್ಯುತ್, ಆರೋಗ್ಯ ಸೇವೆ ಉಚಿತ – 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್