– ಅಡ್ವಾನ್ಸ್ ಪೇಮೆಂಟ್ ಮಾಡಿದ್ರೆ ಬಂಕ್ಗಳಿಗೆ ಲೋಡ್ ಸಪ್ಲೈ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಸಿ ಹೆಚ್ಚುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಸೃಷ್ಟಿ ವದಂತಿ ಹೆಚ್ಚಾಗುತ್ತಿದೆ. ಇನ್ನೊಂದು ವಾರ ಕಳೆದ್ರೆ ಪೆಟ್ರೋಲ್ (Petrol) ಸಿಗಲ್ಲ, ಡೀಸೆಲ್ ಸಿಗಲ್ಲ ಅನ್ನೋ ಸುಳ್ಳು ಸುದ್ದಿಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ವದಂತಿಗಳಿಂದ ಬೆದರಿದ ಜನರು ಪೆಟ್ರೋಲ್, ಡೀಸೆಲ್ ಬಂಕ್ಗಳಿಗೆ ಮುಗಿಬೀಳುತ್ತಿದ್ದಾರೆ. 100, 200 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಳ್ಳುವವರು ಕೂಡಾ ಫುಲ್ ಟ್ಯಾಂಕ್ ಮಾಡಿಸಿಕೊಳ್ಳೋಕೆ ನಿಂತಿದ್ದಾರೆ.
ಇದರಿಂದ ರಾಜ್ಯದ ಬಂಕ್ಗಳ (Petrol Bunks) ಎದುರು ಜನಜಾತ್ರೆ ಸೃಷ್ಟಿ ಆಗುತ್ತಿದೆ. ಬೆಂಗಳೂರು (Bengaluru), ಚಿಕ್ಕಬಳ್ಳಾಪುರ, ಬೀದರ್, ರಾಯಚೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಂಕ್ಗಳಿಗೆ ವಾಹನ ಸವಾರರು ಮುಗಿಬೀಳುತ್ತಿದ್ದಾರೆ.
ಕೊಲ್ಲಿಯುದ್ಧದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ವದಂತಿ ಬೆನ್ನುಬಿದ್ದ ಜನರು ಬಂಕ್ಗಳಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಪೆಟ್ರೋಲ್ ಅಭಾವವಿಲ್ಲ. ಗಾಬರಿ ಬೇಡ. ಬೆಂಗಳೂರಿನ ಪೆಟ್ರೋಲ್ ಬಂಕ್ಗಳಲ್ಲಿ ಅಭಾವ ಸೃಷ್ಟಿ ಆಗಿಲ್ಲ. ಬೆಂಗಳೂರಿನ ಪೆಟ್ರೋಲ್ ಬಂಕ್ಗಳಲ್ಲಿ ಕ್ಯೂ ಇಲ್ಲ, ಗದ್ದಲ ಇಲ್ಲ. ಪೆಟ್ರೋಲ್ ಆರಾಮಾಗಿ ಸಿಗ್ತಿದೆ. ಊಹಾಪೋಹ ಸೃಷ್ಟಿ ಮಾಡಬೇಡಿ ಅಂತಾ ಬಂಕ್ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.
ಲೋಡ್ ಸಪ್ಲೈಗೆ ಅಡ್ವಾನ್ಸ್ ಪೇಮೆಂಟ್ ಫಸ್ಟ್
ಸದ್ಯ ಪೆಟ್ರೋಲ್ ಡಿಸೇಲ್ ಸರಬರಾಜಿನಲ್ಲಿ ವ್ಯತ್ಯಯ ಇಲ್ಲ. ಆದರೆ, ಆಯಿಲ್ ಕಾರ್ಪೊರೇಶನ್ನಿಂದ ಹೊಸ ನಿಯಮ ಜಾರಿಗೊಳಿಸಲಾಗಿದೆ. ಮೊದಲು ಸಾಲದ ರೂಪದಲ್ಲಿ ಲೋಡ್ ಕಳಿಸಲಾಗ್ತಿತ್ತು. ಈಗ ಅಡ್ವಾನ್ಸ್ ಪೇಮೆಂಟ್ ಮಾಡಿದ್ರೆ, ಮಾತ್ರ ಬಂಕ್ಗಳಿಗೆ ಲೋಡ್ ಸಪ್ಲೈ ಮಾಡಲಾಗುತ್ತಿದೆ. ಮುಂಗಡ ಹಣ ಪಾವತಿ ಮಾಡದಿದ್ರೆ ಬಂಕ್ಗಳಿಗೆ ಲೋಡ್ ಕಳಿಸುತ್ತಿಲ್ಲ ಎಂದು ಕಂಪನಿಗಳು ದೂಷಿಸುತ್ತಿವೆ. ವಾರ್ ಶುರುವಿಗೂ ಮೊದಲು 60 ರಿಂದ 80 ಲಕ್ಷದ ವರೆಗೆ ಕ್ರೆಡಿಟ್ ನೀಡಲಾಗ್ತಿತ್ತು. ಈಗ ಆಯಿಲ್ ಕಂಪನಿಗಳು ಆ ಸಿಸ್ಟಮ್ ಅನ್ನು ತೆಗೆದುಹಾಕಿವೆ. ಈ ಹಿನ್ನೆಲೆಯಲ್ಲಿ ಅಡ್ವಾನ್ಸ್ ಪೇಮೆಂಟ್ ಮಾಡಿದ ಬಂಕ್ ಮಾಲೀಕರು ಲೋಡ್ಗಾಗಿ ಕಾದು ನಿಂತಿದ್ದಾರೆ.
ಬೆಂಗಳೂರಲ್ಲಿ ಪೊಲೀಸರು ಅಲರ್ಟ್
ತಮಿಳುನಾಡು ಔಟ್ಲೆಟ್ನಲ್ಲಿ ಲೂಸ್ ಕಂಟೈನರ್ನಲ್ಲಿ ಪೆಟ್ರೋಲ್, ಡಿಸೇಲ್ ಮಾರಾಟ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಇನ್ನೊಂದಡೆ ಕಂಟೈನರ್ ಕ್ಯಾನ್ಗಳಲ್ಲಿ ಪೆಟ್ರೋಲ್, ಡೀಸೆಲ್ ಕೊಟ್ರೇ ಬಂಕ್ ಬಂದ್ ಮಾಡಲಾಗುತ್ತೆ ಅಂತಾ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಎಲ್ಲಾ ಪೆಟ್ರೋಲ್ ಬಂಕ್ಗಳಿಗೂ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಪೆಟ್ರೋಲ್, ಡಿಸೇಲ್ ನ್ನು ಕ್ಯಾನ್ನಲ್ಲಿ ನೀಡೋದು ಸಂಪೂರ್ಣ ಕಾನೂನು ಬಾಹಿರವಾಗಿರುತ್ತೆ. ಇದರಿಂದ ಸ್ಫೋಟ ಸಂಭವಿಸಬಹುದು. ಇದು ಸುರಕ್ಷೆಯ ಮಾರ್ಗವೂ ಅಲ್ಲ. ಹೀಗಾಗಿ ಮಾರ್ಗಸೂಚಿ ಅನುಸರಿಸಿ ಗ್ರಾಹಕರ ವಾಹನಗಳಿಗೆ ಮಾತ್ರ ತೈಲ ತುಂಬಿಸಿ ಅಂತಾ ಪ್ರಕಟಣೆ ಹೊರಡಿಸಲಾಗಿದೆ.
ರಾಯಚೂರಿನಲ್ಲಿ ಪೆಟ್ರೋಲ್ಗೆ 300 ರೂಪಾಯಿ ಲಿಮಿಟ್
ರಾಯಚೂರಿನಲ್ಲಿ ಜನ ಪ್ಯಾನಿಕ್ ಆಗಿದ್ದಾರೆ. ಇಲ್ಲಿನ ಪೆಟ್ರೋಲ್ ಬಂಕ್ಗಳ ಮುಂದೆ ಬೈಕ್, ಕಾರುಗಳು ಸಾಲುಗಟ್ಟಿ ನಿಂತಿವೆ. ಅಗತ್ಯ ಪ್ರಮಾಣದಲ್ಲಿ ಪೆಟ್ರೋಲ್, ಡಿಸೇಲ್ ಸಿಗುತ್ತಿದ್ದರೂ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿಯೊಬ್ಬರೂ ಫುಲ್ ಟ್ಯಾಂಕ್ ತುಂಬಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. 25 ಲೀಟರ್ ಕ್ಯಾನ್, ಬಾಟಲ್ಗಳಲ್ಲಿ ಪೆಟ್ರೋಲ್ ಸಂಗ್ರಹಿಸುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದ್ದ ಪೆಟ್ರೋಲ್ ಎಲ್ಲವೂ ಖಾಲಿಯಾಗಿ ಕೆಲ ಬಂಕ್ಗಳು ಬಂದ್ ಆಗಿವೆ. ಜನರನ್ನು ನಿಯಂತ್ರಣ ಮಾಡಲು ಆಗದೇ, ಇನ್ನೂ ಕೆಲ ಬಂಕ್ಗಳು ರಾತ್ರಿ ವೇಳೆ ಬಂದ್ ಆಗುತ್ತಿವೆ. ಪೆಟ್ರೋಲ್ ಅಭಾವವಿಲ್ಲ ಅಂತ ಬಂಕ್ ಮಾಲೀಕರು ಎಷ್ಟೇ ಹೇಳಿದರೂ ಜನರು ಕೇಳುತ್ತಿಲ್ಲ. ಇದರಿಂದ ಒಂದು ಬಾರಿಗೆ ಕೇವಲ 300 ರೂಪಾಯಿ ಪೆಟ್ರೋಲ್ ಅಷ್ಟೇ ಹಾಕುವುದಕ್ಕೆ ಬಂಕ್ ಮಾಲೀಕರು ನಿರ್ಧರಿಸಿದ್ದಾರೆ. ಬಂಕ್ಗಳ ಮುಂದೆ ಬೈಕ್ ಸವಾರರನ್ನ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ಯಾರೂ ಪ್ಯಾನಿಕ್ ಆಗಬಾರದು ಅಂತ ಪೊಲೀಸರೇ ಜಾಗೃತಿ ಮೂಡಿಸುತ್ತಿದ್ದಾರೆ.
ನಯಾರ ಬಂಕ್ಗಳಲ್ಲಿ ದರ ಏರಿಕೆ
ಇನ್ನು, ಪೆಟ್ರೋಲ್ಗೆ ಜನರು ಮುಗಿಬೀಳುತ್ತಿರುವುದರ ಮಧ್ಯೆ ನಯಾರಾ ಪೆಟ್ರೋಲ್ ಬಂಕ್ಗಳಲ್ಲಿ ದರ ಏರಿಕೆ ಮಾಡಲಾಗಿದೆ. ನಯಾರ ಪೆಟ್ರೋಲ್ ಬಂಕ್ಗಳಲ್ಲಿ ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಪ್ರತಿ ಲೀಟರ್ಗೆ 5 ರೂಪಾಯಿ ಹೆಚ್ಚಿಸಿದ್ದು, 103 ರೂಪಾಯಿ 28 ಪೈಸೆ ಇದ್ದ ಪೆಟ್ರೋಲ್ ದರವನ್ನು ಇಂದಿನಿಂದ 108 ರೂಪಾಯಿ 28 ಪೈಸೆಗೆ ಏರಿಕೆಯಾಗಿದೆ. ಇನ್ನೂ ಡೀಸೆಲ್ ದರದಲ್ಲಿ 3 ರೂಪಾಯಿ ಹೆಚ್ಚಿಸಿದ್ದು, 91 ರೂಪಾಯಿ 10 ಪೈಸೆ ಇದ್ದ ದರ 94 ರೂಪಾಯಿ 10 ಪೈಸೆ ಆಗಿದೆ.
ಬೀದರ್: ಗ್ಯಾಸ್ ಸಿಲಿಂಡರ್ ಕೊರತೆಯೂ ಇಲ್ಲ
ಬೀದರ್ನಲ್ಲಿ ಪೆಟ್ರೋಲ್-ಡಿಸೇಲ್ ಅಭಾವ ವದಂತಿಯಿಂದ ಪೆಟ್ರೋಲ್ ಬಂಕ್ಗಳಲ್ಲಿ ತೈಲಕ್ಕಾಗಿ ವಾಹನ ಸವಾರರು ಮುಗಿಬೀಳುತ್ತಿದ್ದಾರೆ. ಈ ಹಿನ್ನೆಲೆ ಬೀದರ್ ನಗರದ ಪೆಟ್ರೋಲ್ ಬಂಕ್ಗಳಿಗೆ ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಜನರಲ್ಲಿ ಡಿಸೇಲ್, ಪೆಟ್ರೋಲ್ ಸಿಗುತ್ತಿಲ್ಲವೆಂದು ಆತಂಕ ಸೃಷ್ಟಿಯಾಗಿದೆ. ಹೀಗಾಗಿ, ಜನರು ಬಂಕ್ಗಳಲ್ಲಿ ಮುಗಿ ಬೀಳುತ್ತಿದ್ದು, ಜಿಲ್ಲೆಯಲ್ಲಿ ಡಿಸೇಲ್, ಪೆಟ್ರೋಲ್ಗೆ ಯಾವುದೇ ಕೊರತೆ ಇಲ್ಲ. ಜಿಲ್ಲೆಯ ಜನರು ವದಂತಿಗಳಿಗೆ ಕಿವಿಗೊಡಬಾರದು. ಅವಶ್ಯಕತೆ ಇರುವಷ್ಟು ಮಾತ್ರವೇ ಡಿಸೇಲ್, ಪೆಟ್ರೋಲ್ ಖರೀದಿಸಬೇಕು. ಅವಶ್ಯಕತೆ ಇರದಿದ್ರೂ ಪೆಟ್ರೋಲ್, ಡಿಸೇಲ್ ಸ್ಟಾಕ್ ಮಾಡಿಟ್ಟುಕೊಳ್ಳಬಾರದು. ಅದರಂತೆ, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆಯೂ ಇಲ್ಲ. ಜಿಲ್ಲೆಗೆ ಅವಶ್ಯಕವಿರುವ ಇಂಧನ ಮತ್ತು ಗ್ಯಾಸ್ ಸಿಲಿಂಡರ್ ಸರಬರಾಜು ಆಗುತ್ತಿದ್ದು, ಹೀಗಾಗಿ, ಅನಾವಶ್ಯಕವಾಗಿ ಪೆಟ್ರೋಲ್ ಬಂಕ್, ಸಿಲಿಂಡರ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಡಿಸಿ ಶಿಲ್ಪಾ ಶರ್ಮಾ ಮನವಿ ಮಾಡಿದ್ದಾರೆ.
ಬಾಟಲಿಗಳಿಗೆ ನೋ ಪೆಟ್ರೋಲ್
ಯಾದಗಿರಿ ಜಿಲ್ಲೆಯಲ್ಲಿ ಪೆಟ್ರೋಲ್, ಸಿಲಿಂಡರ್ ಕೊರತೆ ವದಂತಿ ಹೆಚ್ಚಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಪೆಟ್ರೋಲ್ ಬಂಕ್ ಹಾಗೂ ಸಿಲಿಂಡರ್ ಗೋದಾಮುಗಳಿಗೆ ಭೇಟಿ ನೀಡಿದರು. ಜಿಲ್ಲೆಯ ಶಹಾಪುರದ ಹಲವು ಪೆಟ್ರೋಲ್ ಬಂಕ್ ಹಾಗೂ ಸಿಲಿಂಡರ್ ಏಜೆನ್ಸಿ ಗೋದಾಮುಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಯಾದಗಿರಿ ಜಿಲ್ಲೆಯಲ್ಲಿ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಕೊರತೆಯಿಲ್ಲ. ಜನರು ಯಾವುದೇ ವದಂತಿಗೆ ಕಿವಿಗೊಡಬೇಡಿ. ಸಿಲಿಂಡರ್ ಹಾಗೂ ಪೆಟ್ರೋಲ್ ಹಾಗೂ ಡಿಸೇಲ್ ಕೊರತೆಯಾಗದಂತೆ ಸರಬರಾಜು ಮಾಡಲಾಗುತ್ತದೆ. ಸಿಲಿಂಡರ್ ಮನೆ ಮನೆಗೆ ಪೂರೈಕೆ ಮಾಡಲಾಗುತ್ತಿದೆ. ಪೆಟ್ರೋಲ್ ಹಾಗೂ ಡಿಸೇಲ್ ಅನ್ನು ಜನರು ಬಾಟಲ್ಗಳಲ್ಲಿ ತುಂಬಿಕೊಂಡು ಹೋಗಬಾರದು ಎಂದು ಮನವಿ ಮಾಡಿದ್ದಾರೆ.
120 ಪೆಟ್ರೋಲ್ ಬಂಕ್ಗಳಲ್ಲೂ ಸ್ಟಾಕ್ ಇದೆ
ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಅಭಾವ ವದಂತಿ ಬೆನ್ನಲ್ಲೇ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 120 ಪೆಟ್ರೋಲ್ ಬಂಕ್ಗಳು ಇವೆ. ಎಲ್ಲಾ ಕಡೆ ಪೆಟ್ರೋಲ್ ಡಿಸೇಲ್ ಸ್ಟಾಕ್ ಇದೆ. ಯಾರೂ ಕೂಡ ಪ್ಯಾನಿಕ್ ಆಗಿ ಪೆಟ್ರೋಲ್, ಡೀಸೆಲ್ ಬಂಕ್ ಮುಂದೆ ನಿಲ್ಲುವ ಅವಶ್ಯಕತೆ ಇಲ್ಲ. ಕ್ಯಾನ್ಗಳಲ್ಲಿ ಡ್ರಮ್ಗಳಲ್ಲಿ ಪೆಟ್ರೋಲ್ ಡಿಸೇಲ್ ತುಂಬಿಸಿಕೊಂಡು ಹೋಗಬಾರದು. ಏನಾದರೂ ಅವಶ್ಯಕತೆ ಇಲ್ಲದೆ ತುಂಬಿಸಿಕೊಂಡು ಹೋದರೆ, ಪೆಟ್ರೋಲ್ ಡಿಸೇಲ್ ಅನ್ನು ಕೃತಕ ಅಭಾವ ಸೃಷ್ಟಿ ಮಾಡಿದರೆ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಇತ್ತ ಪೆಟ್ರೋಲ್, ಡೀಸೆಲ್ ಅಭಾವ ವದಂತಿ ಬೆನ್ನಲ್ಲೇ ಹುಬ್ಬಳ್ಳಿ ಬಂಕ್ಗಳು ಸಹಜ ಸ್ಥಿತಿಯತ್ತ ಮರಳಿವೆ. ಕಳೆದ ಎರಡು ದಿನಗಳಿಂದ ವಾಹನ ಸವಾರರಿಂದ ತುಂಬಿ ತುಳುಕುತ್ತಿದ್ದ ಬಂಕ್ಗಳು ಈಗ ಖಾಲಿ ಖಾಲಿಯಾಗಿವೆ. ನಿನ್ನೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆಗೆ ಸಭೆ ಮಾಡಿ 90 ದಿನಗಳಿಗೆ ಬೇಕಾಗುವ ಇಂಧನ ಸ್ಟಾಕ್ ಇದೆ. ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಸ್ಪಷ್ಟನೆ ನೀಡಿದ್ದರು. ಜಿಲ್ಲಾಧಿಕಾರಿ ಸ್ನೇಹಲ್ ಸಹ ಜನರು ಆತಂಕ ಪಡೋದು ಬೇಡ ಅಂತ ಮನವಿ ಮಾಡಿದ್ದರು. ಇನ್ನೂ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸಹ ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮವಾಗುತ್ತೆ ಅಂತ ವಾರ್ನಿಂಗ್ ಮಾಡಿದ್ದರು.
ಬಳ್ಳಾರಿ, ವಿಜಯನಗರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್- ಡಿಸೇಲ್ ಖರೀದಿಗೆ ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ಗೆ ಯಾವುದೇ ಸಮಸ್ಯೆ ಇಲ್ಲ. ಸಾಮಾಜಿಕ ಜಾಲತಾಣ ನೋಡಿ ಯಾರೂ ಗಾಬರಿಯಾಗಬೇಡಿ. ಪೆಟ್ರೋಲ್, ಡಿಸೇಲ್ ಎಲ್ಲವೂ ಇದೆ, ಯಾವುದೇ ಕೊರತೆ ಇಲ್ಲ. ಯಾರೂ ಕೂಡ ಆತಂಕ ಪಡೋ ಅವಶ್ಯಕತೆ ಇಲ್ಲ ಎಂದು ಬಂಕ್ ಮಾಲೀಕರು ಮನವಿ ಮಾಡಿದ್ದಾರೆ.
ಪೆಟ್ರೋಲ್, ಡೀಸೆಲ್ ಬಗ್ಗೆ ಬೇಕಿಲ್ಲ ಭಯ
ರಾಜ್ಯದ ಗ್ರಾಮೀಣ ಭಾಗದಲ್ಲಿ ಬಂಕ್ಗಳಿಗೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಸಮಸ್ಯೆ ಬಹುತೇಕ ಬಗೆಹರಿದಿದೆ ಎಂದು ಟ್ರೇಡರ್ಸ್ ಅಸೋಸಿಯೇಶನ್ ಸದಸ್ಯ ತಾರಾನಾಥ್ ಮಾಹಿತಿ ನೀಡಿದ್ದಾರೆ. ಪಬ್ಲಿಕ್ ಟಿವಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಬಳಿಕ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಇವತ್ತು ಬಂಕ್ಗಳಿಗೆ ಕಂಪನಿಗಳು ಲೋಡ್ ನೀಡುತ್ತಿವೆ. ಶನಿವಾರದಿಂದ ಮುಂಗಡ ಪಾವತಿ ಮಾಡಿದ್ರೂ ಲೋಡ್ ಸಿಗುತ್ತಿರಲಿಲ್ಲ. ಆದ್ರೆ ಈಗ ಸಮಸ್ಯೆ ಬಗೆಹರಿದಿದೆ. ಉತ್ತರ ಕರ್ನಾಟಕದಲ್ಲಿ ಕೊಂಚ ಸಮಸ್ಯೆ ಇದೆ. ಬೇರೆ ಭಾಗದಲ್ಲಿ ಸಮಸ್ಯೆ ಬಗೆಹರಿದಿದೆ ಎಂದಿದ್ದಾರೆ. ಇನ್ನಾದ್ರೂ ಸಾರ್ವಜನಿಕರು ಅಲರ್ಟ್ ಆಗಿಬೇಕಿದೆ.

