ಚಿಕ್ಕಬಳ್ಳಾಪುರ: ಅಪಘಾತಕ್ಕೀಡಾಗಿ ನರಳಾಡುತ್ತಿದ್ದರೂ ವಿಡಿಯೋ ಮಾಡುವ ಮೂಲಕ ಜನರು ಮಾನವೀಯತೆ ಮರೆತ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯ ರಸ್ತೆಗೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿತ್ತು. ಹೀಗಾಗಿ ಮತ್ತೊಂದು ರಸ್ತೆಯಲ್ಲಿ ಎರಡು ಬದಿಯ ವಾಹನಗಳು ಒಂದೇ ರಸ್ತೆಯಲ್ಲಿ ದ್ವಿಮುಖವಾಗಿ ಸಂಚರಿಸುತ್ತಿತ್ತು. ಈ ಕಾರಣದಿಂದಾಗಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡ ವ್ಯಕ್ತಿ ಯಲಹಂಕ ಮೂಲದ ವೆಂಕಟರಮಣ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ವೆಂಕಟರಮಣ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿ ನರಳಾಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಜನ ವಿಡಿಯೋ ಮಾಡಿಕೊಂಡು ಮಾತುಗಳಲ್ಲಿ ಬ್ಯೂಸಿಯಾಗಿದ್ದು ಎಲ್ಲರಿಗೂ ಬೇಸರ ಮೂಡಿಸುವಂತಿದೆ.