ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಲಾಳನಕೆರೆ ಗ್ರಾಮದ ಹಾಗೂ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಹಾಸ್ ಟೋಕಿಯೋದಲ್ಲಿ ನಡೆದ ಪ್ಯಾರಾಲಂಪಿಕ್ಸ್ ಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸುವುದರ ಮೂಲಕ ಹಾಸನ ಜಿಲ್ಲೆಯ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್
ಸಚಿವ ಗೋಪಾಲಯ್ಯನವರು, ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳಿಗಾಗಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ನಲ್ಲಿ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಎಲ್.ಯತಿರಾಜ್ರವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಪ್ಯಾರಾಲಂಪಿಕ್ಸ್ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಐಎಎಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸುಹಾಸ್ ಒಬ್ಬ ಕನ್ನಡಿಗ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದಿದ್ದಾರೆ. ಇದನ್ನೂ ಓದಿ:ಬೆಳ್ಳಿ ಹುಡುಗ ಸುಹಾಸ್ಗೆ ಕುಟುಂಬಸ್ಥರ ಅಭಿನಂದನೆ
ಸುಹಾಸ್ ಹಾಸನದ ಲಾಳನಕೆರೆಯಲ್ಲಿ ಜನಿಸಿ, ಶಿವಮೊಗ್ಗದಲ್ಲಿ ಬೆಳೆದು, ದಕ್ಷಿಣ ಕನ್ನಡದ ಸುರತ್ಕಲ್ನಲ್ಲಿ ಎನ್ಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತು, ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯಾಗಿ, ಮಥುರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಇವರು, ಆರು ಜಿಲ್ಲೆಗಳ ಡಿಎಂ ಆಗಿ ಸೇವೆ ಸಲ್ಲಿಸಿದ ನಂತರ, ಈಗ ಗೌತಮ್ ಬುದ್ಧ ನಗರದ ಜಿಲ್ಲೆಯ ದಂಡಾಧಿಕಾರಿಯಾದ್ದಾರೆ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ, ಐದು ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಹಾಸ್ ನಮ್ಮ ಕನ್ನಡಿಗ ಎಂದು ಹೇಳಲು ನಮಗೆ ಹೆಮ್ಮೆಯ ವಿಷಯವಾಗಿದೆ. ಸುಹಾಸ್ ಎಲ್.ಯತಿರಾಜ್ ರವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.