ಮಂಡ್ಯ: ರಾಜಕೀಯ ದ್ವೇಷಕ್ಕೆ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ, ಕಾರನ್ನು ಸಂಪೂರ್ಣ ಜಖಂಗೊಳಿಸಿರುವ ಘಟನೆ ನಡೆದಿದೆ.
ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾದ ಅಧ್ಯಕ್ಷ ನವೀನ್, ನನ್ನ ಕಾರಿನ ಮೇಲೆ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರು ಕಲ್ಲು ಎತ್ತಿ ಹಾಕಿ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನವೀನ್ ನಾಗಮಂಗಲದ ಬಿಜಿ ನಗರದಲ್ಲಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ತಮ್ಮ ಪತ್ನಿಯನ್ನು ಹೆರಿಗೆಗಾಗಿ ದಾಖಲಿಸಿದ್ದರು. ಆಸ್ಪತ್ರೆ ಬಳಿ ಕಾರು ನಿಲ್ಲಿಸಿ ಪತ್ನಿಗೆ ಊಟ ತರಲು ಹೊರಗೆ ತೆರಳಿದ್ದರು. ಕಾರಿನ ಬಳಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ನವೀನ್ ಅವರ ಕಾರಿನ ಮೇಲೆ ಕಲ್ಲು ಎತ್ತಾಕಿ ಕಾರನ್ನು ಜಖಂಗೊಳಿಸಿದ್ದಾರೆ.
ನವೀನ್ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾಗಿದ್ದು, ಸುರೇಶ್ ಗೌಡರ ವಿರುದ್ಧ ಸಭೆಯೊಂದರಲ್ಲಿ ಮಾತನಾಡಿದಕ್ಕೆ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಸುರೇಶ್ ಗೌಡ ಬೆಂಬಲಿಗರಿಂದ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿದ್ದು, ಇಂದು ಕಾರನ್ನ ಜಖಂಗೊಳಿಸಿರೋದು ಅವರ ಬೆಂಬಲಿಗರೇ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯಕ್ಕೆ ಬೆಳ್ಳೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.