ನೆಲಮಂಗಲ: ಶಿವಗಂಗೆ ಎಂಬುದು ಚಾರಣಕ್ಕೊಂದು ಕಾರಣ, ಭಕ್ತಿಗೊಂದು ಹಾದಿ, ದೇವಾಲಯಗಳ ದಿಬ್ಬಣ, ಸೂರ್ಯೋದಯವಿಲ್ಲಿ ಸಂಕ್ರಮಣ. ಇಂತಹ ಪವಿತ್ರವಾದ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ವಿಸ್ಮಯ ರೀತಿಯಲ್ಲಿ ಜಲೋಧ್ಬವವಾಗಿದೆ.
ದಕ್ಷಿಣ ಕಾಶಿ ಎಂದೇ ಹೆಸರಾದ ಶಿವಗಂಗೆ ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದ್ದು, ಬೆಂಗಳೂರಿಗರ ಅಚ್ಚುಮೆಚ್ಚಿನ ಸ್ಥಳ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಿಂದ 6 ಕಿ.ಮೀ ದೂರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತದೆ. ಪಶ್ಚಿಮದಿಂದ ನೋಡಿದರೆ ಇಡೀ ಬೆಟ್ಟವೇ ಶಿವಲಿಂಗದ ಆಕಾರದಲ್ಲಿ ಕಾಣಿಸುತ್ತದೆ. ಪೂರ್ವದಿಂದ ನೋಡಿದರೆ ಹೋರಿಯಂತೆಯೂ, ಉತ್ತರದಿಂದ ಸರ್ಪದಂತೆಯೂ ಹಾಗೂ ದಕ್ಷಿಣದಿಂದ ಗಣೇಶನಂತೆಯೂ ಕಾಣಿಸುತ್ತದೆ. ಈ ಬೆಟ್ಟದ ಮೇಲೆ ಗಂಗಾಧರೇಶ್ವರ ಹಾಗೂ ಹೊನ್ನಮ್ಮದೇವಿ ದೇವಾಲಯಗಳಿವೆ. ಇದನ್ನೂ ಓದಿ: ಚಿಲಿಯಲ್ಲಿ ನಿಗೂಢ ಸಿಂಕ್ಹೋಲ್ ಪತ್ತೆ – ಹೇಗೆ ಬಂತು ಅಂತ ಯಾರಿಗೂ ಗೊತ್ತಿಲ್ಲ!
ಶಿವಗಂಗೆ ಬೆಟ್ಟದ ತುದಿಯಲ್ಲಿ ಏಕಶಿಲೆಯಿಂದ ನಿರ್ಮಿಸಲಾದ ಬೃಹತ್ ನಂದಿ ವಿಗ್ರಹವಿದೆ. ಇದರಿಂದ ಮುಂದೆ ಸಾಗಿದರೆ ಪಾತಾಳಗಂಗೆ ದೇವಾಲಯ ಸಿಗುತ್ತದೆ. ಇಲ್ಲಿ ದೇವಾಲಯದ ಕೆಳಗೆ ಜಲ ಹರಿಯುತ್ತದೆ. ಇದೀಗ ಸಮುದ್ರ ಮಟ್ಟದಿಂದ 3,600 ಅಡಿ ಎತ್ತರದ ಶಿಖರವಾದ ಪಾತಾಳ ಗಂಗೆಯಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಜಲಸಾಗರ ಹರಿದುಬಂದಿದೆ. ಇದೇ ಮೊದಲ ಬಾರಿಗೆ ಪಾತಾಳ ಗಂಗೆಯಲ್ಲಿ ನೀರು ಉಕ್ಕಿ ಹರಿದಿದ್ದು, ದೇವಾಲಯ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದನ್ನೂ ಓದಿ: ಸಾಲು-ಸಾಲು ಸರಗಳ್ಳತನ- 5 ರಾಜ್ಯಗಳಲ್ಲಿ ಸದ್ದು ಮಾಡ್ತಿದ್ದ ಖತರ್ನಾಕ್ ಕಳ್ಳ ಬೆಂಗ್ಳೂರಿನಲ್ಲಿ ಅರೆಸ್ಟ್
ಈ ಬೆಟ್ಟದ ಮೇಲೆ ನೀರಿನ ಮೂಲಗಳಿದ್ದು, ಪುರಾಣಗಳ ಪ್ರಕಾರ ಈ ನೀರು ಗಂಗೆಯ ಸ್ವರೂಪ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಗಂಗೆಯೂ ಇದ್ದು, ಹಲವು ಪುಟ್ಟ ಪುಟ್ಟ ದೇವಾಲಯಗಳೂ ಇರುವುದರಿಂದ ಈ ಸ್ಥಳಕ್ಕೆ ದಕ್ಷಿಣಕಾಶಿ ಎಂಬ ಉಪಮೆಯೂ ಸೇರಿಕೊಂಡಿದೆ. ಇಲ್ಲಿನ ಗಂಗಾಧರೇಶ್ವರ ದೇವಾಲಯದ ಶಿವಲಿಂಗಕ್ಕೆ ಒಂದು ವಿಶೇಷ ಶಕ್ತಿ ಇದೆ. ಅದೇನೆಂದರೆ ನೀವು ಆ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದರೆ ಅದು ಕ್ಷಣಾರ್ಧದಲ್ಲಿ ತುಪ್ಪ ಆಗಿ ಬದಲಾಗುತ್ತದೆ.
ಒಳಕಲ್ ತೀರ್ಥ ಕೂಡಾ ಜನರನ್ನು ಆಕರ್ಷಿಸುವ ಕೇಂದ್ರ. ಇಲ್ಲಿ ಸಣ್ಣದೊಂದು ಬಿಲದಂಥ ರಚನೆಯಲ್ಲಿ ಕೈ ಹಾಕಬೇಕು. ಯಾರ ಕೈಗೆ ನೀರು ತಾಕುತ್ತದೋ ಅವರು ಪುಣ್ಯ ಮಾಡಿದ್ದಾರೆ ಹಾಗೂ ನೀರು ತಾಕದವರು ಪಾಪಾತ್ಮರು ಎಂಬ ನಂಬಿಕೆ ಇದೆ. ಆದರೆ, ನೀವು ಸರಿಯಾಗಿ ಗಮನಿಸಿ ಆಳಕ್ಕೆ ಕೈ ತಾಕಿಸಿದರೆ ಪುಣ್ಯಾತ್ಮರ ಪಟ್ಟಿಗೆ ಸೇರಬಹುದು. ಒಟ್ಟಾರೆ ನಾನಾ ಪವಾಡಗಳಿಗೆ ಸಾಕ್ಷಿಯಾಗಿರುವ ಶಿವಗಂಗೆ ಬೆಟ್ಟ ಸದ್ಯ ನಿರಂತರ ಮಳೆಯಿಂದಾಗಿ ಬೆಟ್ಟದ ಪವಾಡ ಸ್ಥಾನಗಳು ಅಚ್ಚರಿ ರೀತಿಯಲ್ಲಿ ಗಂಗೋತ್ಪತ್ತಿಯಾಗುತ್ತಿದೆ.