ಚಂಡೀಗಢ: ನರ್ಸ್ಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.
ಮೀನಾಕ್ಷಿ ಸೈನಿ(31) ಆತ್ಮಹತ್ಯೆ ಮಾಡಿಕೊಂಡ ನರ್ಸ್. ಭಾನುವಾರ ಸಾಹಾ ಪ್ರೈಮರಿ ಹೆಲ್ತ್ ಸೆಂಟರಿನಲ್ಲಿ(ಪಿಎಚ್ಸಿ) ಮೀನಾಕ್ಷಿ ನೈಟ್ ಡ್ಯೂಟಿ ಮಾಡುತ್ತಿದ್ದಳು. ಈ ವೇಳೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮೀನಾಕ್ಷಿ 22 ನಿಮಿಷಗಳ ಕಾಲ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಅಜಯ್ ಜೊತೆ ಮಾತನಾಡಿದ್ದಳು. ಬಳಿಕ ಅಜಯ್ ಪಿಎಚ್ಸಿ ಬಾಗಿಲು ಒಡೆದು ಮೀನಾಕ್ಷಿಯನ್ನು ಎಂಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನು. ಆದರೆ ಅಷ್ಟರಲ್ಲಿ ಮೀನಾಕ್ಷಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು. ಸದ್ಯ ಪೊಲೀಸರು ಅಜಯ್ನನ್ನು ವಿಚಾರಣೆ ನಡೆಸತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಾಹಾ ಪೊಲೀಸ್ ಠಾಣೆ ಉಸ್ತುವಾರಿ ಚಂದ್ರಭನ್, “ಮೀನಾಕ್ಷಿ ತಂದೆ ಹರ್ಕಿತ್ ಸಿಂಗ್ ಅವರ ದೂರಿನ ಮೇರೆಗೆ ಅಜಯ್, ಮೀನಾಕ್ಷಿ ಪತಿ ಕುಲ್ದೀಪ್ ಶರ್ಮಾ, ಅತ್ತೆ ಜ್ಞಾನ ಚಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮೀನಾಕ್ಷಿ ಹಾಗೂ ಅಜಯ್ ಆತ್ಮೀಯ ಸ್ನೇಹಿತರಾಗಿದ್ದರು. ಮೀನಾಕ್ಷಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಅಜಯ್ ಪಿಎಚ್ಸಿ ಒಳಗೆ ಅಥವಾ ಸುತ್ತಮುತ್ತ ಇದ್ದನು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಶನಿವಾರ ಮೀನಾಕ್ಷಿ ನೈಟ್ ಡ್ಯೂಟಿ ಮಾಡುತ್ತಿದ್ದಳು ಎಂದು ಪಿಎಚ್ಸಿ ಉಸ್ತುವಾರಿ ಡಾ. ವಿಕಾಸ್ ತಿಳಿಸಿದ್ದರು” ಎಂದು ಹೇಳಿದ್ದಾರೆ.
ಮೀನಾಕ್ಷಿ ಹೊರತಾಗಿ ಸೆಕ್ಯೂರಿಟಿ ಗಾರ್ಡ್ ಪಿಎಚ್ಸಿಯಲ್ಲಿ ಇದ್ದರು. ಸೆಕ್ಯೂರಿಟಿ ಬೆಳಗ್ಗೆ 7.10ಕ್ಕೆ ಕೆಲಸ ಮುಗಿಸಿಕೊಂಡು ಹೋಗಿದ್ದರು. ಫೆಬ್ರವರಿ 27 ಹಾಗೂ 28ರಂದು ಅಜಯ್ಗೆ ಬೇರೆ ಯುವತಿಯ ಜೊತೆ ಮದುವೆ ನಿಗದಿಯಾಗಿತ್ತು. ಈ ಮೊದಲು ಕೂಡ ಅಜಯ್ಗೆ ಬೇರೆ ಕಡೆ ಮದುವೆ ಫಿಕ್ಸ್ ಆಗಿತ್ತು. ಆದರೆ ಮೀನಾಕ್ಷಿ ಆ ಮದುವೆಯನ್ನು ಮುರಿಯುವಂತೆ ಮಾಡಿದ್ದಳು. ಹೀಗಾಗಿ ಈ ಬಾರಿ ಅಜಯ್, ಮೀನಾಕ್ಷಿಗೆ ತಿಳಿಯದಂತೆ ಕದ್ದುಮುಚ್ಚಿ ಮದುವೆ ಆಗಲು ನಿರ್ಧರಿಸಿದ್ದನು. ಈ ವಿಷಯ ತಿಳಿದ ಮೀನಾಕ್ಷಿ ಮೂರು ದಿನಗಳ ಹಿಂದೆ ದೊಡ್ಡ ರಂಪಾಟವನ್ನೇ ಮಾಡಿದ್ದಳು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಮೀನಾಕ್ಷಿ 12 ವರ್ಷಗಳ ಹಿಂದೆ ಕುಲ್ದೀಪ್ ಶರ್ಮಾ ಜೊತೆ ಅಂರ್ತಜಾತಿ ಲವ್ ಮ್ಯಾರೇಜ್ ಆಗಿದ್ದಳು. ಈ ಮದುವೆಗೆ ಇಬ್ಬರ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ನಂತರ ಮೀನಾಕ್ಷಿ ಮಾವ ಆಕೆಗೆ ಸಾಥ್ ನೀಡಿದ್ದರು. ಆದರೆ ಮೀನಾಕ್ಷಿ ಅತ್ತೆ ಆಕೆಯನ್ನು ತನ್ನ ಸೊಸೆ ಎಂದು ಒಪ್ಪಿಕೊಳ್ಳಲಿಲ್ಲ. ಮದುವೆಯಾದ ಕೆಲವು ದಿನಗಳ ನಂತರ ಕುಲ್ದೀಪ್ ಆಸ್ಟ್ರೇಲಿಯಾಗೆ ಹೋಗಿದ್ದರು. ಕಳೆದ 12 ವರ್ಷದಲ್ಲಿ ಕುಲ್ದೀಪ್ ಹಾಗೂ ಮೀನಾಕ್ಷಿ ಕೇವಲ ಎರಡು ಅಥವಾ ಮೂರು ಬಾರಿ ಭೇಟಿ ಆಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.