ನವದೆಹಲಿ: ಇಂದು ಇಡೀ ದೇಶಕ್ಕೆ ಮಹತ್ವದ ದಿನ. ಪ್ರಗತಿಯತ್ತ ಭಾರತ ಮತ್ತೊಂದು ಮೈಲಿಗಲ್ಲಿನ ಕಡೆಗೆ ದಾಪುಗಾಲು ಇಡುತ್ತಿದೆ. ಜಪಾನ್ನ ಸಹಕಾರದಲ್ಲಿ ಬುಲೆಟ್ ರೈಲು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಇಂದು ಶಂಕುಸ್ಥಾಪನೆ ನಡೆಯಲಿದೆ. ಆದರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ.
2022 ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣವಾಗಲಿದ್ದು ಅದೇ ದಿನ ಅಹಮದಾಬಾದ್ – ಮುಂಬೈ ಬುಲೆಟ್ ರೈಲಿನ ಸಂಚಾರ ಆರಂಭಿಸಲು ರೈಲ್ವೇ ಇಲಾಖೆ ಗುರಿಯನ್ನು ಹಾಕಿಕೊಂಡಿದೆ. ಈ ರೈಲು ಮಾರ್ಗ ಅಲ್ಲದೇ ಇನ್ನು 6 ಮಾರ್ಗಗಳಲ್ಲಿ ಬುಲೆಟ್ ರೈಲು ಓಡಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಮಾರ್ಗಗಳ ಪಟ್ಟಿಯಲ್ಲಿ ಕರ್ನಾಟಕವನ್ನು ಕೈಬಿಡಲಾಗಿದೆ.
ಸಪ್ತ ಮಾರ್ಗಗಳು:
ಅಹಮದಾಬಾದ್- ಮುಂಬೈ, ದೆಹಲಿ – ಕೋಲ್ಕತ್ತಾ, ದೆಹಲಿ – ಮುಂಬೈ, ಮುಂಬೈ – ಚೆನ್ನೈ, ದೆಹಲಿ – ಚಂಡೀಘಡ, ಮುಂಬೈ – ನಾಗಪುರ, ದೆಹಲಿ – ನಾಗಪುರ. ಈ ಏಳು ಮಾರ್ಗಗಳ ಪೈಕಿ ಕರ್ನಾಟಕಕ್ಕೆ ಒಂದೇ ಒಂದು ಮಾರ್ಗವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಚೆನ್ನೈ ಮತ್ತು ನಾಗಪುರಕ್ಕೆ ಎರಡು ಮಾರ್ಗಗಳನ್ನು ನೀಡಿದ್ದು ಐಟಿ ಬಿಟಿ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರನ್ನು ಯಾಕೆ ಕೈ ಬಿಟ್ಟಿದ್ದಾರೆ ಎನ್ನುವುದು ಈಗಿರುವ ಪ್ರಶ್ನೆ.
ಕಾವೇರಿ, ಮಹದಾಯಿಯಲ್ಲಿ ಅನ್ಯಾಯ ಆಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ಬುಲೆಟ್ ರೈಲು ಕರ್ನಾಟಕಕ್ಕೆ ಕೈತಪ್ಪಿದೆ. ಈ ಬೃಹತ್ ಯೋಜನೆ ರಾಜ್ಯಕ್ಕೆ ಕೈತಪ್ಪಲು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದು ಕಾರಣವೇ? ಅಥವಾ ಅಥವಾ ರಾಜ್ಯ ಬಿಜೆಪಿ ಸಂಸದರಿಗೆ ಇಚ್ಛಾ ಶಕ್ತಿ ಕೊರತೆಯೇ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ