ಮಂಡ್ಯ: ಒಬ್ಬ ಹೆಣ್ಣು ಮಗಳಾಗಿ ಇನ್ನೊಬ್ಬ ಹೆಣ್ಣು ಮಗಳ ಬಗ್ಗೆ ಮಾತಾನಾಡುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯ ದುರ್ಬಳಕೆ ಆರೋಪದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಮದ್ದೂರು ತಾಲೂಕಿನ ನಿಡಘಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಇಷ್ಟು ಕೇವಲವಾಗಿ ಮಾತನಾಡುವುದು ನನ್ನ ಪ್ರಕಾರ ಸರಿಯಲ್ಲ. ಒಬ್ಬ ಹೆಣ್ಣು ಮಗಳ ಬಗ್ಗೆ ಅದರಲ್ಲೂ ಅತ್ಯಂತ ಪ್ರಾಮಾಣಿಕವಾಗಿ, ಬದ್ಧತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಯ ಬಗ್ಗೆ ಅವರು ಒಬ್ಬ ಹೆಣ್ಣು ಮಗಳಾಗಿ ಮಾತನಾಡುವುದು ಸರಿಯಿಲ್ಲ ಎಂದು ಸುಮಲತಾ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಆರೋಪ ಮಾಡಿದವರು ಸಾಕ್ಷಿ ನೀಡಲಿ. ಸಾಕ್ಷಿ ಇಲ್ಲದಿದ್ದರೆ ಆರೋಪ, ಆರೋಪವಾಗಿಯೇ ಉಳಿಯುತ್ತದೆ. ಒಬ್ಬ ಅಧಿಕಾರಿ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ, ಸಾಕ್ಷಿ ನೀಡಬೇಕು. ಏನಾದರೂ ಸಮಸ್ಯೆ ಇದ್ದರೆ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಹಾಗಾಗಿ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ನಿಖಿಲ್ ಹೇಳಿದರು.
ನಾವು ನೇರವಾಗಿ ಮತದಾರರ ಪ್ರಭುಗಳ ಬಳಿ ಹೋಗಿ ನಮ್ಮ ಸರ್ಕಾರ ಬಂದು 9 ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಮಾಡಿರುವ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇನೆ. ಅದು ಬಿಟ್ಟು ನಾವು ಬೇರೆಯವರ ಬಗ್ಗೆ ನಾನು ಆರೋಪ ಮಾಡಿಲ್ಲ ಎಂದರು.