ಬೆಂಗಳೂರು: ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಸಿಎಂ ಎಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಜಗನ್ರನ್ನ ಭೇಟಿ ಮಾಡಿರುವ ನಿಖಿಲ್ ಕುಮಾರಸ್ವಾಮಿ ಅವರ ಫೋಟೋಗಳನ್ನು ಆಂಧ್ರ ಸಿಎಂ ಟ್ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಆಂಧ್ರ ಪ್ರದೇಶದ ನೂತನ ಸಿಎಂ ಆಗಿ ಜಗನ್ ಮೋಹನ್ ರೆಡ್ಡಿ ಮೇ 30 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅಭೂತಪೂರ್ವ ಜನಾದೇಶ ಪಡೆದ ಜಗನ್, ತೆಲುಗು ದೇಶಂ ಪಕ್ಷದ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಸೋಲಿಸಿ ಹೊಸ ಅಲೆ ಸೃಷ್ಟಿಸಿದ್ದರು.
ಚಂದ್ರಬಾಬು ನಾಯ್ಡು ಅವರು ಜೆಡಿಎಸ್ ಪಕ್ಷದ ನಾಯಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯ ವೇಳೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರವಾಗಿ ನಾಯ್ಡು ಅವರು ಪ್ರಚಾರ ನಡೆಸಿದ್ದರು. ಅಲ್ಲದೇ ಜೆಡಿಎಸ್ ವರಿಷ್ಠರಾದ ಎಚ್ಡಿಡಿ ಅವರು ಚಂದ್ರಬಾಬು ನಾಯ್ಡು ಪರ ರಾಷ್ಟ್ರಮಟ್ಟದಲ್ಲಿ ಬೆಂಬಲಿಸಿದ್ದರು.
ಇತ್ತ ತಮ್ಮ ತಂದೆ, ಆಂಧ್ರಪ್ರದೇಶ ಮಾಜಿ ಸಿಎಂ ವೈಎಸ್ ರಾಜಶೇಜರ ರೆಡ್ಡಿ ಅವರನ್ನು ಕಳೆದುಕೊಂಡ ಬಳಿಕ ಕಾಂಗ್ರೆಸ್ ನಿಂದ ಬಂಡಾಯವಾಗಿ ಪಕ್ಷ ತೊರೆದಿದ್ದ ಯುವನಾಯಕ, ವೈ.ಎಸ್. ಜಗನ್ ಮೋಹನ್ ರೆಡ್ದಿ ಅವರು 10 ವರ್ಷಗಳ ಕಾಲ ರಾಜಕೀಯದಲ್ಲಿ ಪಕ್ಷವನ್ನು ಕಟ್ಟಲು ಪಾದಯಾತ್ರೆಗಳನ್ನು ಕೈಗೊಂಡಿದ್ದರು. ಆ ಮೂಲಕ ಜನರ ಮನ ಗೆದ್ದು ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದರು.
ముఖ్యమంత్రి వైయస్ జగన్ మోహన్ రెడ్డిని మర్యాదపూర్వకంగా కలిసిన కర్నాటక ముఖ్యమంత్రి కుమారస్వామి కుమారుడు నిఖిల్ గౌడ. @CMofKarnataka pic.twitter.com/FB6FMmir4M
— CMO Andhra Pradesh (@AndhraPradeshCM) June 11, 2019
ಸಿಎಂ ಜಗನ್ ರನ್ನ ವಿಜಯವಾಡಾದಲ್ಲಿ ಭೇಟಿಯಾಗಿದ್ದ ನಿಖಿಲ್ ಅವರು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ ಹತ್ತು ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲದ ಅವರ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಕರ್ನಾಟಕದ ರಾಜಕಾರಣವನ್ನು ಕೂಡ ಚೆನ್ನಾಗಿ ತಿಳಿದಿದ್ದು, ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ, ಯಾವುದಕ್ಕೂ ಹಿಂಜರಿಯದೆ ಜನಸೇವೆಯೊಂದನ್ನೇ ಗುರಿಯಾಗಿಟ್ಟುಕೊಂಡು ಮುಂದುವರಿಯುವಂತೆ ನನಗೆ ಸಲಹೆ ನೀಡಿದರು ಎಂದು ನಿಖಿಲ್ ಹೇಳಿಕೊಂಡಿದ್ದಾರೆ.