ಬೆಳಗಾವಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ಡೈಲಾಗ್ ಸಖತ್ತಾಗಿ ಟ್ರೋಲ್ ಆಗುತ್ತಿದ್ದು, ಸ್ವತಃ ಸಿಎಂ ಕುಮಾರಸ್ವಾಮಿ ಅವರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ಆದರೂ ಜಿಲ್ಲೆಯಲ್ಲಿ ನಡೆದ ಜಾತ್ರೆಯಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಯುವಕರು ಘೋಷಣೆ ಕೂಗಿದ್ದಾರೆ.
ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಲಕ್ಷ್ಮೀ ವೆಂಕಟೇಶ್ವರ ಜಾತ್ರೆ ನಡೆದಿದ್ದು, ರಥೋತ್ಸವ ವೇಳೆ ತೇರಿಗೆ ಬಾಳೆಹಣ್ಣು ಮತ್ತು ಖರ್ಜೂರ ಎಸೆಯುವಾಗ ಯುವಕರು ನಿಖಿಲ್ ಎಲ್ಲಿದ್ದೀಯಪ್ಪ ಎಂದು ಘೋಷಣೆ ಕೂಗಿದ್ದಾರೆ. ಒಬ್ಬರು ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೂಗಿದರೆ ಆತನಿಗೆ ಉತ್ತರಿಸುವಂತೆ ಅನೇಕ ಯುವಕರು `ಅಪ್ಪ ರಾಮದುರ್ಗ ಜಾತ್ರೆಯಲ್ಲಿ ಇದ್ದೀನಿ ಅಪ್ಪ’ ಎಂದು ಘೋಷಣೆ ಕೂಗಿದ್ದಾರೆ. ಇದೀಗ ಯುವಕರು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಆರ್ ಸಿಬಿ ಮ್ಯಾಚ್ ನಡೆಯುತ್ತಿದ್ದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಬರೆದು ಬೋರ್ಡ್ ಹಿಡಿಯುವ ಮೂಲಕ ಟ್ರೋಲ್ ಮಾಡಲಾಗಿತ್ತು. ಕಳೆದ ದಿನ ಕೆಆರ್ ನಗರದ ನಾರಾಯಣಪುರದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆ ಟ್ರೋಲ್ ಮಾಡುವರು ಯಾರೋ? ನಿಖಿಲ್ ಎಲ್ಲಿದ್ದೀಯಪ್ಪ ಎಂದರೆ ಅವನು ನಮ್ಮ ಹೃದಯದಲ್ಲಿ ಇದ್ದಾನೆ ಎನ್ನಬೇಕು ಎಂದು ಹೇಳಿದ್ದರು.