ಬೆಂಗಳೂರು: ಹೊಸ ವರ್ಷದ ಹೊತ್ತಲ್ಲಿ ಜನಸಂದಣಿ ನಿರ್ಬಂಧಿಸಿ ಹೆಚ್ಚಾಗುತ್ತಿರುವ ಕೊರೋನಾ, ರೂಪಾಂತರಿ ಓಮಿಕ್ರಾನ್ ಹರಡದಂತೆ ತಡೆಯಲು ಸರ್ಕಾರ ಕಠಿಣ ನಿಯಮ ಪ್ರಕಟಿಸಿದೆ.
ರಾಜ್ಯಾದ್ಯಂತ ನಾಳೆ ರಾತ್ರಿ 10 ಗಂಟೆಯಿಂದ ಜನವರಿ 7ರ ಮುಂಜಾನೆ 5 ಗಂಟೆವರೆಗೆ ಒಟ್ಟು 10 ದಿನ ಕಾಲ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಆದರೆ ಈ ರಾತ್ರಿ ನಿರ್ಬಂಧಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜಕಾರಣಿಗಳ ಕಾರ್ಯಕ್ರಮಗಳಿಗೆ ಇಲ್ಲದ ನಿರ್ಬಂಧ ಜನ ಸಾಮಾನ್ಯರಿಗೆ ಯಾಕೆ..? 2 ವರ್ಷದಿಂದ ಅನುಭವಿಸ್ತಿರುವ ಪಾಡು ಸಾಲದಾ..? ಬಡವರ ಹೊಟ್ಟೆ ಮೇಲೆ ಏಕೆ ಹೊಡೀತೀರಿ..? ಕೊರೋನಾ ರಾತ್ರಿ ಮಾತ್ರ ಬರುತ್ತಾ..? ಸರ್ಕಾರದ ಕಾರ್ಯಕ್ರಮಗಳಲ್ಲಿ ಕೊರೋನಾ ಬರಲ್ವಾ..? ವ್ಯಾಪಾರಿಗಳಿಗೆ ಲಾಸ್ ತುಂಬಿಕೊಡುವವರು ಯಾರು..? ಪರಿಹಾರ ನೀಡಿ ಲಾಕ್ಡೌನ್ ಆದ್ರೂ ಮಾಡ್ಕೊಳ್ಳಿ, ನೈಟ್ ಕರ್ಫ್ಯೂ ಬೇಕಿದ್ರೂ ಮಾಡಿಕೊಳ್ಳಿ. ಅಂತ ಆಕ್ರೋಶಭರಿತ, ತೀಕ್ಷ್ಣವಾದ ಪ್ರಶ್ನೆಗಳು ಸರ್ಕಾರದ ವಿರುದ್ಧ ತೂರಿ ಬಂದಿವೆ. ಇದನ್ನೂ ಓದಿ: ಚಂಡೀಗಢ ಬಿಜೆಪಿ, ಕಾಂಗ್ರೆಸ್ಗೆ ಮುಖಭಂಗ – ನಗರಪಾಲಿಕೆ ಚುನಾವಣೆಯಲ್ಲಿ ಎಎಪಿ ಮೇಲುಗೈ
ಸರ್ಕಾರದ ತೀರ್ಮಾನಕ್ಕೆ ಮುಖ್ಯವಾಗಿ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್, ಕ್ಲಬ್-ಪಬ್-ಬಾರ್ ಗಳು, ಥಿಯೇಟರ್, ಆಟೋ-ಟ್ಯಾಕ್ಸಿ ವಲಯದಲ್ಲಿ ತೀವ್ರ ಟೀಕೆ-ಟಿಪ್ಪಣಿ ವ್ಯಕ್ತವಾಗಿದೆ. ಸರ್ಕಾರದ ಎಲ್ಲಾ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸ್ತೇವೆ. ದಯವಿಟ್ಟು ನೈಟ್ ಕರ್ಫ್ಯೂ ಸಡಿಲಿಸಿ ಅಂತ ಕೆಲವರೂ, ನೈಟ್ ಕರ್ಫ್ಯೂ ಬೇಡವೇ ಬೇಡ ಮತ್ತೆ ಕೆಲವರೂ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ – ಒಂದೂ ಎಸೆತ ಕಾಣದೇ ಎರಡನೇ ದಿನದಾಟ ರದ್ದು