– ನೂತನ ಸಚಿವರಿಗೆ ಬಿಜೆಪಿ ಹೈಕಮಾಂಡ್ನಿಂದ ಖಡಕ್ ಸಂದೇಶ
ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ 10 ಜನ ಅರ್ಹ ಶಾಸಕರು ಸಚಿವ ಸ್ಥಾನ ಪಡೆದು ಫುಲ್ ಖುಷ್ ಮೂಡ್ನಲ್ಲಿ ಇರುವಾಗಲೇ ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶವೊಂದನ್ನು ರವಾನಿಸಿದೆ.
ಹಲೋ ನ್ಯೂ ಮಿನಿಸ್ಟರ್ಸ್, ನೀವು ಪರ್ಮನೆಂಟ್ ಅಲ್ಲ. 6 ತಿಂಗಳು ಚಾನ್ಸ್ ಎಂದು ಬಿಜೆಪಿ ಹೈಕಮಾಂಡ್ನಿಂದ ನೂತನ ಸಚಿವರಿಗೆ ಸಂದೇಶ ರವಾನೆಯಾಗಿದೆ. ‘ಕೆಲಸ ಚೆನ್ನಾಗಿ ಮಾಡುವವರು. ಪಕ್ಷಕ್ಕೆ ಗೌರವ ಕೊಡುವವರು ಪೂರ್ಣ ಅವಧಿಯವರೆಗೆ ಇರುತ್ತಾರೆ. ಮಂತ್ರಿ ಮಾಡಬೇಕು ಮಾಡಿದ್ದೇವೆ. ಆದ್ರೆ ಎಷ್ಟು ವರ್ಷದವರೆಗೆ ಮಂತ್ರಿ ಆಗಿಯೇ ಇರುತ್ತೀರಿ ಎನ್ನುವ ಬಗ್ಗೆ ನಾವು ಈಗಲೇ ಗ್ಯಾರಂಟಿ ನೀಡುವುದಿಲ್ಲ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಮಂತ್ರಿ ಪದವಿ ಸಿಕ್ಕಿದ ನಂತರ 6 ತಿಂಗಳ ಬಳಿಕ ಮೌಲ್ಯಮಾಪನ ನಡೆಯುತ್ತಿದೆ. ಈ ಮೌಲ್ಯಮಾಪನದಲ್ಲಿ ಫೇಲ್ ಆದವರು ಮನೆಗೆ ಹೋಗುವುದು ಪಕ್ಕಾ. ಸಂಪುಟ ಪುನಾರಚನೆ ವೇಳೆ ಕಳಪೆ ಸಾಧನೆ ತೋರಿದವರು ಮಂತ್ರಿಮಂಡಲದಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಇದರಿಂದಾಗಿ ನೂತನ ಸಚಿವರು ಸ್ವಲ್ಪ ಭಯಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಸಿಎಂ ಯಡಿಯೂರಪ್ಪ ಅವರು, ಪ್ರಮಾಣ ವಚನ ಸ್ವೀಕರಿಸಿದ ನೂತನ 10 ಮಂದಿ ಸಚಿವರಿಗೆ ಸಲಹೆಗಳನ್ನು ನೀಡಿದ್ದಾರೆ. ನೂತನ ಸಚಿವರ ಜೊತೆ ಸಂಪುಟ ಕೊಠಡಿಯಲ್ಲಿ ಸಭೆ ನಡೆಸಿದ್ದ ಸಿಎಂ, ಆರಂಭದಲ್ಲಿ ಅಭಿನಂದನೆ ತಿಳಿಸಿ ಸರ್ಕಾರ ಮತ್ತು ಪಕ್ಷದಲ್ಲಿ ಯಾವ ರೀತಿ ಇರಬೇಕೆಂಬ ಬಗ್ಗೆ ಪಾಠ ಮಾಡಿದ್ದರು.
ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ ಭರವಸೆಯನ್ನು ಈಡೇರಿಸಿದ್ದೇನೆ. ಆದರೆ ಖಾತೆಗಾಗಿ ನೀವು ಸ್ವಲ್ಪ ಕಾಯಬೇಕು. ಖಾತೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬೇಡಿಕೆ ಇಡಬೇಡಿ. ಹೈಕಮಾಂಡ್ ಜೊತೆ ಚರ್ಚಿಸಿ ಖಾತೆಗಳನ್ನು ಅಂತಿಮಗೊಳಿಸುತ್ತೇನೆ ಎಂದು ಹೇಳಿದ್ದರು.