ಕುರಿ ಲೆಕ್ಕ ಹಾಕಲು ಬಾರದವನಿಗೆ ಹಣಕಾಸು ಖಾತೆ ಯಾಕೆ ಎಂದಿದ್ದವರಿಗೆ 13 ಬಜೆಟ್‌ ಮಂಡಿಸಿ ಠಕ್ಕರ್‌ ಕೊಟ್ಟ ‘ಟಗರು’!

Public TV
2 Min Read
SIDDARAMAIAH BUDGET

ಸಿದ್ದರಾಮನಹುಂಡಿ ಎಂಬ ಕುಗ್ರಾಮದಿಂದ ವಿಧಾನಸೌಧದ ಅಧಿಕಾರದ ಗದ್ದುಗೆವರೆಗೆ ಸಿದ್ದರಾಮಯ್ಯ ನಡೆದುಬಂದ ಹಾದಿಯೇ ರೋಚಕ. ಬಡ ರೈತ ಕುಟುಂಬ ಹಿನ್ನಲೆಯ, ತಳಸಮುದಾಯದ ವ್ಯಕ್ತಿಯೊಬ್ಬ ರಾಜಕೀಯದಲ್ಲಿ ಬೆಳೆದು ಉತ್ತಮ ಸ್ಥಾನಗಳನ್ನು ಅಲಂಕರಿಸಿ ಎದೆಯುಬ್ಬಿಸಿ ನಡೆಯುತ್ತಿದ್ದದ್ದು, ಅನೇಕರ ಕಣ್ಣು ಕೆಂಪಾಗಿಸಿತ್ತು. ವ್ಯಕ್ತಿ ಎಷ್ಟು ಎತ್ತರಕ್ಕೇ ಬೆಳೆದರೂ, ಕೌಟುಂಬಿಕ ಹಿನ್ನೆಲೆಯನ್ನು ಮುಂದೆ ತಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದವರಿಗೇನು ಕಮ್ಮಿಯಿಲ್ಲ.

SIDDARAMAIAH 1 2

ಅದು 1994ರ ಸಂದರ್ಭ. ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ ಅವರು ಹೆಚ್‌.ಡಿ.ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು. ಆ ಸಂದರ್ಭದಲ್ಲಿ ಅವರು ಬಯಸಿದ್ದು ಕಂದಾಯ ಇಲಾಖೆ ಖಾತೆ. ಆದರೆ ಸಿಕ್ಕಿದ್ದು ಹಣಕಾಸು ಖಾತೆ. ಆಗ ಸಿದ್ದರಾಮಯ್ಯರನ್ನು ಅನೇಕರು ಲೇವಡಿ ಮಾಡಿದ್ದರು. “ಸಿದ್ದರಾಮಯ್ಯಗೆ ಕುರಿ ಲೆಕ್ಕ ಹಾಕಲು ಬರುವುದಿಲ್ಲ. ಈತ ಹೇಗೆ ಹಣಕಾಸು ಸಚಿವನಾಗುತ್ತಾನೆ” ಅಂತ ಕುಹಕದ ಮಾತುಗಳು ಕೇಳಿಬಂದಿದ್ದವು. ಇದನ್ನೂ ಓದಿ: ತಂದೆಗೆ ಮಗ ಡಾಕ್ಟರ್‌ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ

siddaramaiah h.d.devegowda

ಈ ನಿಂದನೆ, ಲೇವಡಿ, ಅಪಮಾನವನ್ನು ಸವಾಲಾಗಿಯೇ ಸ್ವೀಕರಿಸಿದ ಸಿದ್ದರಾಮಯ್ಯ ಆಗಿನ ಸಂದರ್ಭದಲ್ಲಿ ತಮ್ಮ ಮೊದಲ ಬಜೆಟ್‌ ಮಂಡಿಸಿ ತನ್ನನ್ನು ಟೀಕಿಸಿದವರೇ ಅಚ್ಚರಿ ಪಡುವಂತೆ ಮಾಡಿದ್ದರು. ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಬಗ್ಗೆ ಆಗ ಭರಪೂರ ಪ್ರಶಂಸೆ ವ್ಯಕ್ತವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸಿದ್ದರಾಮಯ್ಯ ಅವರು ಬರೋಬ್ಬರಿ 13 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

siddaramaiah old photo

ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ ಏಳು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ 2005-07 ಮತ್ತು ಆಗಿನ ಜೆಡಿ ಸರ್ಕಾರದಲ್ಲಿ 1995-2000 ವರೆಗೆ. 1995 ಮತ್ತು 1996 ರಲ್ಲಿ ಹೆಚ್‌.ಡಿ. ದೇವೇಗೌಡರ ಅಡಿಯಲ್ಲಿ ಎರಡು ಬಾರಿ. 1997, 1998 ಮತ್ತು 1999 ರಲ್ಲಿ ಜೆ.ಹೆಚ್. ಪಟೇಲ್ ಅವರ ಅಡಿಯಲ್ಲಿ ಮೂರು ಬಾರಿ. 2005 ಮತ್ತು 2006 ರಲ್ಲಿ ಎನ್. ಧರಂ ಸಿಂಗ್ ನೇತೃತ್ವದಲ್ಲಿ ಬಜೆಟ್ ಮಂಡಿಸಿದ್ದಾರೆ.

2013ರಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಆಗ ಹಣಕಾಸು ಖಾತೆಯನ್ನೂ ಹೊಂದಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸತತ 6 ಬಜೆಟ್ ಮಂಡಿಸಿದ್ದಾರೆ. ಇದನ್ನೂ ಓದಿ: ನುಗ್ಗೆಕಾಯಿ, ಅವರೆಕಾಳು ಸಾರು, ರೇಷ್ಮೆ ಬಟ್ಟೆ, ಪುನೀತ್‌ ಸಿನಿಮಾ ಅಂದ್ರೆ ಡಿಕೆಶಿಗೆ ಪ್ರಾಣ

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ 14ನೇ ಬಜೆಟ್‌ ಮಂಡಿಸಲು ಸಹ ಅವರು ಸಜ್ಜಾಗಿದ್ದಾರೆ.

 

Share This Article