`ಮರ್ಯಾದೆ ಪ್ರಶ್ನೆ’ ಸಿನಿಮಾ ಮೂಲಕ ಮಿಡಲ್ ಕ್ಲಾಸ್ ಜನರ ಮನಸ್ಥಿತಿ ಮತ್ತು ಅವರ ಪರಿಸ್ಥಿತಿ ಎರಡನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ನಾಗರಾಜ ಸೋಮಯಾಜಿ (Nagaraja Somayaji) ಈಗ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ದೀಪಾವಳಿ ಹಬ್ಬದ ವಿಶೇಷವಾಗಿ ನಾಗರಾಜ ಸೋಮಯಾಜಿ ಅವರ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ಅನಾವರಣಗೊಂಡಿದೆ.
ಚಿತ್ರಕ್ಕೆ ದೇವಿ ಮಹಾತ್ಮೆ (Devi Mmahatme) ಎಂಬ ಟೈಟಲ್ ಇಡಲಾಗಿದೆ. ಪೋಸ್ಟರ್ನಲ್ಲಿ ಎರಡು ಶೇಡ್ಗಳನ್ನ ಕಾಣಬಹುದು. ಹಳ್ಳಿ ಹಾಗೂ ಸಮುದ್ರದ ಹಿನ್ನೆಲೆಯಲ್ಲಿ ಪೋಸ್ಟರ್ಗಳನ್ನು ಆಕರ್ಷಕವಾಗಿ ಡಿಸೈನ್ ಮಾಡಲಾಗಿದೆ.
ದೇವಿ ಮಹಾತ್ಮೆ ಟೈಟಲ್ ಕೇಳಿದ ತಕ್ಷಣ ದೇವರ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ಇದೊಂದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಚಿತ್ರ. ನಾಗರಾಜ ಸೋಮಯಾಜಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾದಿರಾಜ ಶೆಟ್ಟಿ, ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಬಿ ಕಿರಣ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ.
ಯುವಿಜಿ ಸ್ಟುಡಿಯೋ ಬ್ಯಾನರ್ ನಡಿ ವಿದ್ಯಾ ಗಾಂಧಿರಾಜನ್ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ ಹಾಗೂ ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ದೇವಿ ಮಹಾತ್ಮೆಗೆ ಇರಲಿದೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ತಾರಾಬಳಗ ಹಾಗೂ ಉಳಿದ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.