ಮೈಸೂರು: ಬಂದವರ ತಾಳ್ಮೆ ಪರೀಕ್ಷೆ ಮಾಡಬೇಡಿ. ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಿ ಒಳ್ಳೆಯ ಆಡಳಿತ ಕೊಡಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಟ್ಟು ಬಂದ ಶಾಸಕರು ಇನ್ನೆಷ್ಟು ದಿನ ಕಾಯುತ್ತಾರೆ? ಪಾಪ 17 ಜನರು ನಮ್ಮ ಪಕ್ಷಕ್ಕೆ ಬಂದು ಸರ್ಕಾರ ರಚನೆಗೆ ಕಾರಣ ಆಗಿದ್ದಾರೆ. ಅವರಿಗೆ ಸ್ಥಾನಮಾನ ಕೊಡೋದು ಪಕ್ಷದ ಜವಾಬ್ದಾರಿ ಎಂದರು.
ಪಕ್ಷಾಂತರಿ ಶಾಸಕರ ಜೊತೆ ಮಾತನಾಡಿರೋದು ಸಿಎಂ. ಭರವಸೆ ಕೊಟ್ಟಿರೋದು ಸಿಎಂ ಅವರೇ. ಹಾಗಾಗಿ ಸಿಎಂ ಹೈಕಮಾಂಡ್ ಜೊತೆ ಮಾತನಾಡಲಿ. ಅವರು ಕೊಟ್ಟ ಭರವಸೆ ಬಗ್ಗೆ ಹೈಕಮಾಂಡ್ಗೆ ಮನವರಿಕೆ ಮಾಡಲಿ ಎಂದು ಹೇಳಿದರು. ಸಿಎಂ ಯಾರು ಯಾರಿಗೇ ಯಾವ ರೀತಿ ಮಾತು ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ವಿಶ್ವನಾಥ್ ಆಗಲಿ ಇನ್ನೊಬ್ಬರ ಬಗ್ಗೆ ನಾನು ಮಾತನಾಡೋಲ್ಲ. ಬಂದ ಎಲ್ಲರಿಗೂ ಯಡಿಯೂರಪ್ಪ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿ ಎಂದ ಅವರು, ಸಂಪುಟ ವಿಸ್ತರಣೆ ತಡ ಆದರೆ ಏನೂ ಆಗೋಲ್ಲ. ಆ ಬಗ್ಗೆ ಇನ್ನೆನು ಹೇಳೋದಿಲ್ಲ ಎಂದು ತಿಳಿಸಿದರು.