ಬೆಂಗಳೂರು: ರಾತ್ರೋ ರಾತ್ರಿ ಕಾಂಗ್ರೆಸ್ ಶಾಸಕರು ತಂಗಿದ್ದ ದೇವನಹಳ್ಳಿ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ್ ಅನಾರೋಗ್ಯದ ಸಮಸ್ಯೆಯಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾತ್ರೋ ರಾತ್ರಿ ಬೆಂಗಳೂರು ಬಿಟ್ಟು ಮುಂಬೈ ಸೇರಿದ್ದ ಶ್ರೀಮಂತ ಪಾಟೀಲ್ ಹೃದಯ ಬಡಿತ, ಬ್ಲಡ್ ಪ್ರೆಶರ್ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಮುಂಬೈನಲ್ಲಿರುವ ಸೆಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಾಗಿದ್ದು, ಎದೆ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ಹೈಡ್ರಾಮಾ ನಡೆದಿದ್ದು, ಇಷ್ಟು ದಿನ ಸೈಲೆಂಟಾಗಿದ್ದ ರಮೇಶ್ ಜಾರಕಿಹೊಳಿ ಆಪ್ತ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಳೆದ ರಾತ್ರಿ ದಿಢೀರ್ ಕಾಂಗ್ರೆಸ್ ಶಾಸಕರು ತಂಗಿರುವ ದೇವನಹಳ್ಳಿಯ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದರು.
ಸ್ಪೀಕರ್ ಗೆ ಪತ್ರ
ಕಾಗವಾಡ ವಿಧಾನಸಭಾ ಸದಸ್ಯನಾದ ಶ್ರೀಮಂತ ಪಾಟೀಲ್ ಆದ ನಾನು ಅನಾರೋಗ್ಯದ ಕಾರಣದಿಂದ ವಿಧಾನ ಸಭೆ ಕಲಾಪಕ್ಕೆ ಬರುಲು ಆಗುತ್ತಿಲ್ಲ. ಹೃದಯ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಾನು ವೈದ್ಯರ ಅಣತಿಯಂತೆ ಸೆಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅದ್ದರಿಂದ ಕರ್ನಾಟಕದ 15ನೇ ವಿಧಾನಸಭೆಯ 4ನೇ ಅಧಿವೇಶನಕ್ಕೆ ಗೈರು ಹಾಜರಾಗುತ್ತೇನೆಂದು ಈ ಮೂಲಕ ತಿಳಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.