ಉಡುಪಿ: ಮೊದಲು ನಾನು ಶ್ರೀರಾಮ ಭಕ್ತೆ ನಂತರ ಸಂಸದೆ ಎಂದು ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ರಾಮಮಂದಿರ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ದೇಶದಲ್ಲಿ ಜಾತ್ಯಾತೀತತೆಯ ಹೆಸರಿನಲ್ಲಿ ಬಂದ ಸರ್ಕಾರಗಳು ರಾಮಮಂದಿರ ನಿರ್ಮಾಣ ಮಾಡಿಲ್ಲ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸುಪ್ರೀಂ ಕೋರ್ಟ್ ನಲ್ಲೂ ಪ್ರಯತ್ನ ಮಾಡಿದ್ದೇವೆ. ಕೇಂದ್ರ ಸರ್ಕಾರ ಸುಪ್ರೀಂ ಆದೇಶಕ್ಕಾಗಿ ಕಾಯುತ್ತಿದೆ. ರಾಮಮಂದಿರ ನಿರ್ಮಾಣ ಕುರಿತು ಇಂದು ಇಲ್ಲಿ ಸೇರಿರುವ ನಿಮ್ಮ ಭಾವನೆಯನ್ನು ಪ್ರಧಾನಿ ಮೋದಿ ಅವರಿಗೆ ಮುಟ್ಟಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಕಪಿಲ್ ಸಿಬಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ಅಕ್ಟೋಬರ್ 29 ರಂದು ನೀಡಬೇಕಿದ್ದ ತೀರ್ಪಿಗಾಗಿ ಕಾಯುತ್ತಿದ್ದೆವು. ಆದರೆ ಕಪಿಲ್ ಸಿಬಲ್ ಅವರು 2019ರ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದುಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕಳೆದ 4 ವರ್ಷಗಳಿಂದಲೂ ಕಪಿಲ್ ಸಿಬಲ್ ನೇತೃತ್ವದ ವಕೀಲರ ತಂಡ ಇದೇ ಪ್ರಯತ್ನ ನಡೆಸಿದೆ. ಪ್ರಕರಣದ ವಿಚಾರಣೆ ಮತ್ತೆ ಜನವರಿ 29ಕ್ಕೆ ಬರಲಿದ್ದು, ಈ ಕುರಿತ ತೀರ್ಪು ಏನಾಗಲಿದೆ ಎಂಬ ಭಯ ನಮ್ಮಲಿದೆ. ಡಿಸೆಂಬರ್ 11 ರಿಂದ ಲೋಕಸಭಾ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ರಾಮಮಂದಿರ ನಿರ್ಮಾಣದ ಚರ್ಚೆಗೆ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣ ಮಾಡುವ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಇಂದು ಇಷ್ಟು ಮಂದಿ ಸೇರಿದ್ದೀರಾ. ಒಬ್ಬ ಜನಪ್ರತಿನಿಧಿಯಾಗಿ ನಾನು ಕೂಡ ಅಧಿವೇಶನದಲ್ಲಿ ಸುಗ್ರೀವಾಜ್ಞೆ ತರಲು ಪ್ರತ್ನಿಸುತ್ತೇನೆ. ನಿಮ್ಮ ಈ ಕಾರ್ಯಕ್ಕೆ ನಮ್ಮ ಬೆಂಬಲವೂ ಇದೆ. ದೇಶದಲ್ಲಿ ನಮ್ಮ ಸರ್ಕಾರ ಬರಲು ನಿಮ್ಮ ಬೆಂಬಲ ಕಾರಣ, ನಿಮ್ಮ ಆಗ್ರಹವನ್ನು ಪ್ರಧಾನಿಗಳಿಗೆ ನನ್ನ ಮೂಲಕ ಮುಟ್ಟಿಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ : `ಮುಸಲ್ಮಾನರು ಕಲಿಯುಗದ ರಾಕ್ಷಸರು’: ರಾಘವಲು ಪ್ರಚೋದನಕಾರಿ ಭಾಷಣ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv