ಮೈಸೂರು: ಕುಡುಕ ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಮೂವರನ್ನು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸುವ ಮುನ್ಸೂಚನೆ ಅರಿತ ದೇವಾಲಯದ ಸಿಬ್ಬಂದಿ ಪೊಲೀಸರ ನೆರವಿನಿಂದ ಅವರನ್ನು ರಕ್ಷಿಸಿದ್ದಾರೆ. ಮೈಸೂರಿನ ಸುಣ್ಣದಕೇರಿ ನಿವಾಸಿ ತಮ್ಮ ಎರಡು ಮಕ್ಕಳ ಸಮೇತ ಕಪಿಲಾ ನದಿಗೆ ಹಾರಲು ಸಜ್ಜಾಗುತ್ತಿದ್ದಾಗ ರಕ್ಷಿಸಲ್ಪಟ್ಟಿದ್ದಾರೆ. ಮೈಸೂರಿನ ಬೋಗಾದಿಯ ಮಹಿಳೆ 6 ವರ್ಷಗಳ ಹಿಂದೆ ಸುಣ್ಣದಕೇರಿಯ ಶಿವಕುಮಾರ್ ನನ್ನು ಮದುವೆಯಾಗಿದ್ದರು.
ಶಿವಕುಮಾರ್ ಗ್ರಾನೈಟ್ ಕೆಲಸ ಮಾಡುತ್ತಿದ್ದು, ಕುಡಿತದ ಚಟಕ್ಕೆ ದಾಸನಾಗಿದ್ದನು. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾದಾಗ ಪತ್ನಿ ನೆರೆಹೊರೆಯವರ ಬಳಿ ಕೈಸಾಲ ಮಾಡಿ ಟೀ ಅಂಗಡಿ ಇಟ್ಟು ನಷ್ಟ ಅನುಭವಿಸಿದ್ದರು. ಗಂಡನ ವರ್ತನೆ ಬದಲಾಗದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ತನ್ನ ಎರಡೂ ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.
ಹೀಗಾಗಿ ಕಪಿಲಾ ನದಿಗೆ ಹಾರಲೆಂದು ತನ್ನ ಮಕ್ಕಳ ಜೊತೆ ನಂಜನಗೂಡಿಗೆ ಬಂದು ಹದಿನಾರು ಕಾಲು ಮಂಟಪದ ಬಳಿ ನಿಂತಿರುವುದನ್ನು ದೇವಸ್ಥಾನದ ಸಿಬ್ಬಂದಿ ಗಮನಿಸಿದ್ದಾರೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಪತಿ ಶಿವಕುಮಾರ್ ನನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪತ್ನಿ ಹಾಗೂ ಮಕ್ಕಳನ್ನ ಕಳುಹಿಸಿದ್ದಾರೆ.