ತುಮಕೂರು: ಮನೆ ಬಿಟ್ಟು ಹೋಗದ ಅತ್ತೆಯ ಮೇಲೆ ಸೊಸೆ ಕಬ್ಬಿಣ ಪೈಪ್ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಕೆಆರ್ಎಸ್ ಆಗ್ರಹಾರದಲ್ಲಿ (K.R.Agrahara) ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು 65 ವರ್ಷದ ಚಿಕ್ಕತಾಯಮ್ಮ ಎಂದು ಗುರುತಿಸಲಾಗಿದೆ. ಚಿಕ್ಕತಾಯಮ್ಮ ಅವರಿಗೆ ಶಿವಕುಮಾರ್ ಹಾಗೂ ಎನ್.ಶಂಕರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಕುಮಾರ್ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದರೆ, ಇನ್ನೊಬ್ಬ ಮಗ ಎನ್.ಶಂಕರ್ ಜೊತೆ ಚಿಕ್ಕತಾಯಮ್ಮ ಕೆ.ಆರ್.ಎಸ್ ಆಗ್ರಹಾರದ ರೇವಣ್ಣ ಎಂಬವರ ಮನೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಶಂಕರ್ ಅವರು ಸೌಮ್ಯಳೊಂದಿಗೆ ಮದುವೆಯಾಗಿದ್ದು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಹೊಡೆದು ಬೈಕ್ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು
ಬೆಂಗಳೂರಿನಲ್ಲಿ ಇರುವ ಶಿವಕುಮಾರ್ ಅವರ ಮನೆಗೆ ಹೋಗು ಎಂದು ಸೊಸೆ ಸೌಮ್ಯ, ತನ್ನ ಅತ್ತೆ ಚಿಕ್ಕತಾಯಮ್ಮನಿಗೆ ಒತ್ತಾಯ ಮಾಡುತ್ತಾ ಪದೇ, ಪದೇ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಈ ಸಂಬಂಧ ಹಲವು ಬಾರಿ ಸೌಮ್ಯಳಿಗೆ ಮನೆಯ ಅಕ್ಕಪಕ್ಕದವರು ಬುದ್ದಿವಾದ ಹೇಳಿದರು. ಹೀಗಿದ್ದರೂ ನವೆಂಬರ್ 4ರಂದು ಶುಕ್ರವಾರ ಬೆಳಗ್ಗೆ 9-30 ಗಂಟೆ ಸಮಯದಲ್ಲಿ ಚಿಕ್ಕತಾಯಮ್ಮ ಅವರ ಮನೆಯಲ್ಲಿ ಏನೋ ಗಲಾಟೆ ನಡೆಯುತ್ತಿರುವ ಶಬ್ದ ಕೇಳಿ ಬಂದಿದೆ. ಅಷ್ಟರಲ್ಲಿ ಶಂಕರ್ ಅವರ ಮಕ್ಕಳಾದ ಗೌತಮಿ ಮತ್ತು ಸಹನಾ ಮನೆಯಿಂದ ಹೊರಗಡೆ ಬಂದು ನಮ್ಮ ಅಮ್ಮ ಅಜ್ಜಿಗೆ ಹೊಡೆಯುತ್ತಿದ್ದಾರೆ ಎಂದು ಅಳುತ್ತಿದ್ದರು.
ಮನೆಯ ಪಕ್ಕದ ನಾಗೇಂದ್ರ ಹಾಗೂ ಹೆಚ್.ವಿ.ಲಕ್ಷ್ಮಣ್ಗೌಡ ಅವರು ಚಿಕ್ಕತಾಯಮ್ಮ ಅವರ ಮನೆ ಒಳಗೆ ಹೋಗಿ ನೋಡಿದಾಗ ಸೊಸೆ ಸೌಮ್ಯ ಅವರು ಕೈಯಲ್ಲಿ ಅತ್ತೆ ಜುಟ್ಟನ್ನು ಹಿಡಿದು ಎಳೆದಾಡುತ್ತಾ ಕಬ್ಬಿಣದ ಪೈಪ್ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಕ್ತ ಬರುವಂತೆ ಹೊಡೆದಿರುವುದಲ್ಲದೇ ಬೆಂಗಳೂರಿಗೆ ಹೋಗು ಎಂದರೂ ಹೋಗಲ್ಲ ಅಂತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲೆ ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ
ಅಷ್ಟರಲ್ಲಿ ಎಚ್.ವಿ.ಲಕ್ಷ್ಮಣ್ಗೌಡ ಹಾಗೂ ನಾಗೇಂದ್ರ ಸೌಮ್ಯ ಕೈಯಲ್ಲಿದ್ದ ಕಬ್ಬಿಣದ ಪೈಪ್ ಅನ್ನು ಕಿತ್ತುಕೊಂಡು ತೀವ್ರವಾಗಿ ಗಾಯಗೊಂಡಿದ್ದ, ಚಿಕ್ಕತಾಯಮ್ಮನನ್ನು ಅಂಬುಲೆನ್ಸ್ನಲ್ಲಿ ಕರೆದೊಯ್ದು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕ್ಕತಾಯಮ್ಮನ ಸ್ಥಿತಿ ಚಿಂತಾಜನಕವಾಗಿದ್ದು, ಈ ಸಂಬಂಧ ಹೆಚ್.ವಿ.ಲಕ್ಷ್ಮಣಗೌಡ ಕುಣಿಗಲ್ ಠಾಣೆಗೆ ದೂರು ನೀಡಿದ್ದಾರೆ.