ಕೊಲಂಬೋ: ಗೊಟಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷರಾಗಿದ್ದಾಗ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದ್ದ ಸಂದರ್ಭ ಅವರ ಮನೆಯಲ್ಲಿ ಪತ್ತೆಯಾಗಿದ್ದ ಲಂಕಾದ ಲಕ್ಷಾಂತರ ರೂ. ಹಣವನ್ನು ಶ್ರೀಲಂಕಾ ಪೊಲೀಸರು ನ್ಯಾಯಾಲಯದ ಕೈಗೆ ಒಪ್ಪಿಸಿದ್ದಾರೆ.
ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದ ಜನರು 3 ವಾರಗಳ ಹಿಂದೆ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಮನೆಗೆ ನುಗ್ಗಿ ಆಕ್ರೋಶ ಹೊರ ಹಾಕಿದ್ದರು. ಸರ್ಕಾರದ ವಿರುದ್ಧದ ದಂಗೆಗೆ ಹೆದರಿ ರಾಜಪಕ್ಸೆ ಪಲಾಯನಗೈದಿದ್ದರು.
ರಾಜಪಕ್ಸೆ ಲಂಕಾ ತೊರೆದು ಮಾಲ್ಡೀವ್ಸ್ ಹಾಗೂ ಸಿಂಗಾಪುರಕ್ಕೆ ತೆರಳಿ, ಅಲ್ಲಿ ಅವರು ಇ-ಮೇಲ್ ಮೂಲಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಅವರ ನಿವಾಸದಿಂದ 1.8 ಕೋಟಿ ಶ್ರೀಲಂಕಾ ರೂ. ಪತ್ತೆ ಮಾಡಿದ್ದರು. ಬಳಿಕ ಅದನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ
ಕೊಲಂಬೋ ಕೇಂದ್ರೀಯ ಅಪರಾಧಗಳ ತನಿಖಾ ವಿಭಾಗದ ಉಸ್ತುವಾರಿ ಪೊಲೀಸ್ ಅಧಿಕಾರಿ ಗುರುವಾರ ನೀಡಿದ ಆದೇಶದ ಮೇರೆಗೆ ಶುಕ್ರವಾರ ಎಲ್ಲಾ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಈ ಹಣವನ್ನು ಕಳೆದ 3 ವಾರಗಳಿಂದ ನ್ಯಾಯಾಲಯಕ್ಕೆ ಏಕೆ ಸಲ್ಲಿಸಲಿಲ್ಲ ಎಂದು ನ್ಯಾಯಾಧೀಶ ತಿಲಿನಾ ಗಮೇಜ್ ಪ್ರಶ್ನಿಸಿದ್ದಾರೆ.
ಹಣವನ್ನು ನ್ಯಾಯಾಲಯದ ವಶಕ್ಕೆ ನೀಡುವಲ್ಲಿ ಆಗಿರುವ ವಿಳಂಬದ ಕುರಿತು ತನಿಖೆ ನಡೆಸುವಂತೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ಗೆ(ಐಜಿಪಿ) ಆದೇಶಿಸಲಾಗಿದ್ದು, ಇದಕ್ಕಾಗಿ ವಿಶೇಷ ತನಿಖಾ ಘಟಕದ ನಿರ್ದೇಶಕರನ್ನು ನೇಮಕ ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ: ಸ್ಪೇನ್ ಪ್ರಧಾನಿ