– ಹಿಜಬ್ ವಿವಾದ ಬಗ್ಗೆ ನಲಪಾಡ್ ಹೇಳಿದ್ದೇನು..?
ಬೆಂಗಳೂರು: ನಮ್ಮ ದೇಶದಲ್ಲಿ ಅವರವರ ಇಷ್ಟದ ಪ್ರಕಾರ ಧರ್ಮ ಅನುಸರಿಸಬಹುದು ನಾವೆಲ್ಲ ಭಾರತೀಯರು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಹ್ಯಾರಿಸ್ ಅಭಿಪ್ರಾಯ ವಕ್ತಪಡಿಸಿದರು.
ನೆಲಮಂಗಲ ತಾಲೂಕಿನ ವಾದಕುಂಟೆ ಗ್ರಾಮದ ದೇವಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ನಾನು ಅಧ್ಯಕ್ಷ ಆಗಬೇಕೆಂದು ಹರಕೆ ಹೊತ್ತು ಪೂಜೆ ಮಾಡಿಸಿದ್ದಾರೆ. ನಾನೊಬ್ಬ ಮುಸ್ಲಿಂ ಆದರು ಕೂಡಾ ಕಾರ್ಯಕರ್ತರ ಪ್ರೀತಿ ನಂಬಿಕೆಗೆ ಧಕ್ಕೆ ತರಬಾರದೆಂದು, ಪೂಜೆಗೆ ಬಂದು ಎಲ್ಲರನ್ನೂ ಭೇಟಿಯಾಗಿದ್ದು ನನಗೆ ಸಂತೋಷವಾಗಿದೆ. ಇದು ನನ್ನ ದೇಶ ಇದು ಭಾರತ ಅವರವರ ಇಚ್ಛೆಯಂತೆ ದೇವಾಲಯ, ಮಸೀದಿ, ಚರ್ಚ್ಗೆ ನನ್ನನು ಕರೆಯುತ್ತಿರುತ್ತಾರೆ. ಇವತ್ತು ಕೋಮುವಾದಿವಾದಿ ಪಕ್ಷ ಬಿಜೆಪಿ ಸಮಾಜವನ್ನು ಒಡೆಯುತಿದ್ದಾರೆ. ಜನರ ಮನಸ್ಸಿನ ಜೊತೆಗೆ ಆಟವಾಡುತಿದ್ದಾರೆ. ನಾವೆಲ್ಲರೂ ಭಾರತೀಯರು ನಾವೆಲ್ಲ ಒಂದು ಎಂದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ
ರಾಜ್ಯದಲ್ಲಿ ಹಿಜಬ್ ಗೊಂದಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನಗೆ 32 ವರ್ಷ ನಾನು ಎಂದಿಗೂ ಇಷ್ಟು ವರ್ಷದಲ್ಲಿ ಇಂತಹ ಪರಿಸ್ಥಿತಿ ನೋಡಿರಲಿಲ್ಲ. ಅವರ ಅವರ ಇಷ್ಟದ ಪ್ರಕಾರ ಧರ್ಮ ಅನುಸರಿಸಬಹುದು ನಾವೆಲ್ಲ ಭಾರತೀಯರು. ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಎಲ್ಲರಿಗೂ ದೇಶದಲ್ಲಿ ಸಮಾನರಾಗಿ ಬದುಕುವ ಹಕ್ಕಿದೆ. ಬಿಜೆಪಿಯವರು ಸಮಾಜವನ್ನು ಒಡೆಯುತ್ತಿದ್ದು, ಯಾರು ಧರ್ಮದ ಜೊತೆಗೆ ಇರಬಾರದು ಯಾವ ಧರ್ಮವು ಚೆನ್ನಾಗಿರಬಾರದು ಎಂಬುವುದೇ ಇವರ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
70 ವರ್ಷ ಕಾಂಗ್ರೆಸ್ ಕಟ್ಟಿದ ಭಾರತವನ್ನ ಬಿಜೆಪಿಯವರು ಹಾಳುಮಾಡುತ್ತಿದ್ದಾರೆ. ಸರ್ಕಾರ ನಡೆಸಲು ಬರದಿದ್ದರೆ ರಾಜೀನಾಮೆ ನೀಡಿ ಹೋಗಲಿ. 70 ವರ್ಷದಲ್ಲಿ ಇಂತಹ ಆಡಳಿತವನ್ನು ನಾನು ಎಂದಿಗೂ ನೋಡಿರಲಿಲ್ಲ. ಇಂತಹ ಪರಿಸ್ಥಿತಿಯನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಫೇಲ್ ಆಗಿದೆ. ಶಾಲೆಯ ಮಕ್ಕಳಲ್ಲಿ ರಾಜಕೀಯ ತಂದಿದ್ದಾರೆ. ಸರ್ಕಾರ ನಡೆಸಲು ಆಗಲಿಲ್ಲ ಅಂದರೆ ರಾಜಿನಾಮೆ ನೀಡಿ ಮನೆಗೆ ಹೋಗಲಿ. ನಮ್ಮ ಕೈ ಪಕ್ಷದ ಬಳಿ ಒಳ್ಳೆಯ ನಾಯಕರು ಲೀಡರ್ ಇದ್ದು, ಶಾಂತಿಯುತ ಅಧಿಕಾರವನ್ನು ಹೇಗೆ ನಡೆಸಬೇಕೆಂಬುದನ್ನು ತೋರಿಸಿಕೊಡುತ್ತಾರೆ. ಕಾಂಗ್ರೆಸ್ ಯಾವಾಗಲೂ ಶಾಂತಿಯುತ ಆಡಳಿತವನ್ನು ಮಾಡಿದೇ. ಆದರೆ ಬಿಜೆಪಿಯವರ ಆಡಳಿತವು ಜನರಲ್ಲಿರುವ ಶಾಂತಿ, ಪ್ರೀತಿಯನ್ನು ಒಡೆಯುತ್ತಿದೆ ಎಂದರು. ಇದನ್ನೂ ಓದಿ: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ
ಈ ಸಂದರ್ಭದಲ್ಲಿ ಕರಗದ ಶ್ರೀ ಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿದ ಹ್ಯಾರಿಸ್ರವರಿಗೆ ಇಂದು ಬೈಕ್ ರ್ಯಾಲಿ, ಮತ್ತೊಂದೆಡೆ ಟ್ರಾಕ್ಟರ್ ಮೂಲಕ ಮೆರವಣಿಗೆ ಮಾಡಿದ್ದಾರೆ. ನಲಪಾಡ್ರವರು ಒಂದೆಡೆ ಹಿಜಾಬ್ ವಿವಾದ ನಡೆಯುತ್ತಿದ್ದು, ಮತ್ತೊಂದೆಡೆ ದೇವಾಲಯಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಪೂಜೆ ನಡೆಸಲಾಗಿದೆ. ಶ್ರೀಲಕ್ಷ್ಮೀ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ನಂತರ ಅಭಿಮಾನಿಗಳು ಅವರನ್ನು ಬೃಹತ್ ಹಾರ, ಹೂಮಳೆ ಮೂಲಕ ಬರಮಾಡಿಕೊಂಡಿದ್ದಾರೆ. ಟ್ರಾಕ್ಟರ್ ಚಾಲನೆ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಮೆರಗು ತಂದಿದ್ದಾರೆ.